
ಭಟ್ಕಳ: ತಾಲೂಕಿನ ಯೋಗ ಶಿಕ್ಷಕರಾಗಿರುವ ಹಾಗೂ ಯೋಗ ಇನ್ಸ್ಟಿಟ್ಯೂಟ್ನ ತಾಲೂಕು ಉಸ್ತುವಾರಿಯಾದ ಗೋವಿಂದ ಎನ್. ದೇವಾಡಿಗ (ಗೋವಿಂದ ಗುರೂಜಿ) ಅವರಿಗೆ ಯೋಗ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಗುರುತಿಸಿ ‘ಭಾರತೀಯ ಯೋಗ ರತ್ನ-2026’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಭಾರತ ಸರ್ಕಾರದ ನೀತಿ ಆಯೋಗದಡಿ ನೋಂದಾಯಿತ ದಿ ಇಂಡಿಯನ್ ಫೋರಂ ಫಾರ್ ಸೋಶಿಯಲ್ ಲೀಡರ್ಸ್ ಅಂಡ್ ಅಚೀವರ್ಸ್ ಸಂಸ್ಥೆಯು ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಯೋಜಿಸಿದ್ದ ಭಾರತೀಯ ಯೋಗ ಎಕ್ಸಲೆನ್ಸ್ ಅವಾರ್ಡ್ಸ್-2026 ಕಾರ್ಯಕ್ರಮದಲ್ಲಿ ಈ ಗೌರವವನ್ನು ನೀಡಿ ಸನ್ಮಾನಿಸಿದೆ.
ಯೋಗ, ಸಾವಧಾನತೆ (Mindfulness), ಸಮಗ್ರ ಆರೋಗ್ಯ ಹಾಗೂ ಯೋಗ ಕ್ಷೇಮವನ್ನು ಉತ್ತೇಜಿಸಲು ಸಲ್ಲಿಸಿದ ಅತ್ಯುತ್ತಮ ಸಮರ್ಪಣೆ, ಬದ್ಧತೆ ಮತ್ತು ಸ್ಪೂರ್ತಿದಾಯಕ ಸೇವೆಯನ್ನು ಪರಿಗಣಿಸಿ ಗೋವಿಂದ ಗುರೂಜಿಯವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಗೋವಿಂದ ಗುರೂಜಿಯವರು ಹಲವು ವರ್ಷಗಳಿಂದ ಯೋಗ ತರಬೇತಿ, ಆರೋಗ್ಯ ಜಾಗೃತಿ ಹಾಗೂ ಮಾನಸಿಕ ಮತ್ತು ಆಧ್ಯಾತ್ಮಿಕ ಕ್ಷೇಮದ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸಾವಿರಾರು ಮಂದಿಗೆ ಯೋಗಾಭ್ಯಾಸದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಪರಿಚಯಿಸಿದ್ದಾರೆ.
ಈ ಪ್ರಶಸ್ತಿ ಭಟ್ಕಳದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಎತ್ತಿ ಹಿಡಿದಿದ್ದು, ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಗೋವಿಂದ ಗುರೂಜಿಯವರ ಸಾಧನೆ ಇನ್ನಷ್ಟು ಯುವಜನತೆಗೆ ಯೋಗದತ್ತ ಆಸಕ್ತಿ ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿ ಎಂದು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಗೋವಿಂದ ಗುರೂಜಿಯವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದ್ದು, ಅವರ ಸೇವೆ ಇದೇ ರೀತಿ ನಿರಂತರವಾಗಿ ಮುಂದುವರಿದು ದೇಶದಾದ್ಯಂತ ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲಿ ಎಂದು ಶುಭ ಹಾರೈಸಲಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now