ನವದೆಹಲಿಯಲ್ಲಿ ಪೇಜಾವರ ಶ್ರೀಗಳ 39ನೇ ಚಾತುರ್ಮಾಸ್ಯ ವ್ರತ ಸಂಕಲ್ಪ; ಸಮಾರಂಭದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದ ಸಂಸದ ಬಿ.ವೈ.ರಾಘವೇಂದ್ರ.

ನವದೆಹಲಿಯಲ್ಲಿ ಪೇಜಾವರ ಶ್ರೀಗಳ 39ನೇ ಚಾತುರ್ಮಾಸ್ಯ ವ್ರತ ಸಂಕಲ್ಪ; ಸಮಾರಂಭದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದ ಸಂಸದ ಬಿ.ವೈ.ರಾಘವೇಂದ್ರ.
0Shares

ನವದೆಹಲಿ, 30 ಜುಲೈ 2026:ರಾಷ್ಟ್ರ ರಾಜಧಾನಿ ನವದೆಹಲಿಯ ವಸಂತ್ ಕುಂಜ್‌ನಲ್ಲಿರುವ ಶ್ರೀ ವೇದವ್ಯಾಸ ಗುರುಕುಲ ಹಾಗೂ ಶ್ರೀ ಕೃಷ್ಣಧಾಮದಲ್ಲಿ ಉಡುಪಿಯ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ತಮ್ಮ 39ನೇ ಚಾತುರ್ಮಾಸ್ಯ ವ್ರತವನ್ನು ನಿನ್ನೆ ಸಂಕಲ್ಪಿಸಿದ್ದು, ನಿನ್ನೆ ನಡೆದ ಚಾತುರ್ಮಾಸ್ಯ ವ್ರತದ ಉದ್ಘಾಟನಾ ಸಮಾರಂಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಪಾಲ್ಗೊಂಡಿದ್ದರು. ನಿನ್ನೆ ಗುರುಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ, ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡಿದ ಪೂಜ್ಯ ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಸಂಸದ ರಾಘವೇಂದ್ರ, ಶ್ರೀಗಳಿಗೆ ವಿಶೇಷ ಪ್ರಣಾಮ, ಗೌರವಗಳನ್ನು ಸಲ್ಲಿಸಿ, ಆಶೀರ್ವಾದ ಪಡೆದರು. ಶ್ರೀಗಳ ದೆಹಲಿ ಚಾತುರ್ಮಾಸ್ಯ ಅತ್ಯಂತ ಯಶಸ್ವಿಯಾಗಲಿ ಎಂದು ಇದೇ ಸಂದರ್ಭದಲ್ಲಿ ಸಂಸದರು ಭಕ್ತಿಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು.

ದೆಹಲಿಯಲ್ಲಿ ತಮ್ಮ 39ನೇ ಚಾತುರ್ಮಾಸ್ಯ ವ್ರತದ ಸಂಕಲ್ಪ ಮಾಡಿರುವ ಪೇಜಾವರ ಶ್ರೀಗಳ ಗೌರವಾರ್ಥ ನಡೆದ ಸ್ವಾಗತ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ, ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಶ್ರೀ ಅಲೋಕ್ ಕುಮಾರ್, ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು. ನಿನ್ನೆಯಿಂದ ಸೆಪ್ಟೆಂಬರ್ 26ರವರೆಗೆ ಶ್ರೀಗಳು ದೆಹಲಿಯಲ್ಲೇ ವಾಸ್ತವ್ಯ ಮಾಡಲಿದ್ದು, ತಮ್ಮ ನಿತ್ಯಾನುಷ್ಠಾನ, ಧರ್ಮ ಪ್ರಚಾರ ಇತ್ಯಾದಿ ಕಾರ್ಯಗಳನ್ನು ನೆರವೇರಿಸಲಿದ್ದಾರೆ. ‘ದೆಹಲಿಯಲ್ಲಿ ಪೇಜಾವರ ಶ್ರೀಗಳು ಚಾತುರ್ಮಾಸ್ಯ ವ್ರತ ಕೈಗೊಂಡಿರುವುದರಿಂದ ದೆಹಲಿಯ ಭಕ್ತರಿಗೆ ಉಡುಪಿ ಶ್ರೀ ಕೃಷ್ಣನ ಮತ್ತು ಗುರುಗಳ ವಿಶೇಷ ಅನುಗ್ರಹಾಶೀರ್ವಾದಗಳು ಪ್ರಾಪ್ತವಾಗಲಿದೆ. ದೆಹಲಿಯಲ್ಲಿ ನಡೆಯುತ್ತಿರುವ ಶ್ರೀಗಳ ಚಾತುರ್ಮಾಸ್ಯ ವ್ರತವು ದೇಶದಲ್ಲಿ ಶಾಂತಿ, ಸಮೃದ್ಧಿ, ಧರ್ಮ ಹಾಗೂ ಸಾಂಸ್ಕೃತಿಕ ಜಾಗೃತಿಗೆ ಕಾರಣವಾಗಲಿ ಎಂದು ಶ್ರೀಗಳವರಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪ್ರಾರ್ಥನೆ ಸಲ್ಲಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now