
ಮುಂಬಯಿ, ಮಾ.29: ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಗರೋಡಿಯ ಸಂಪೂರ್ಣ ಪುನರ್ ನಿರ್ಮಾಣ, ಶಿಲಾನ್ಯಾಸ ಮತ್ತು ಮುಷ್ಟಿಕಾಣಿಕೆ ಪ್ರಯುಕ್ತ ಇದೇ ಬರುವ ಆದಿತ್ಯವಾರ (ಏ.05) ಸಂಜೆ 4.30 ಗಂಟೆಗೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಗರೋಡಿ ಸೇವಾ ಟ್ರಸ್ಟ್ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ಹಾಗೂ ಮನವಿಪತ್ರ ಬಿಡುಗಡೆ ಮಾಡಲಿದೆ.
ಮುಂಬಯಿಯ ಗರೋಡಿ ಟ್ರಸ್ಟ್ಗೆ ಅನೇಕರು ಇದೀಗಲೇ ತುಂಬು ಹೃದಯದಿಂದ ಸಹಕರಿಸಿದ್ದು, ಮುಂಬಯಿಯ ಗರೋಡಿ ಟ್ರಸ್ಟ್ಟ್ ದಶಮಾನೋತ್ಸವ, ಹದಿನಾಲ್ಕನೇ ವಾರ್ಷಿಕೋತ್ಸವ ಸಂದರ್ಭದಲ್ಲಿ “ತೋನ್ಸೆ ಸ್ಪೂರ್ತಿ” “ತೋನ್ಸೆ ಪ್ರೈಡ್” “ತೋನ್ಸೆ ಅಚೀವರ್” ಮತ್ತು “ಯಂಗ್ ಟ್ಯಾಲೆಂಟ್” ಗೌರವದೊಂದಿಗೆ ಪ್ರಸಿದ್ಧ ಅತಿಥಿüಗಳ ಉಪಸ್ಥಿತಿಯಲ್ಲಿ ಯಶಸ್ವೀ ಕಾರ್ಯಕ್ರಮ ನಡೆಸಲಾಗಿದೆ. ತುಳುನಾಡಿನ ಪ್ರಖ್ಯಾತ ರಾಜ್ಯೋತ್ಸವ ಪುರಸ್ಕೃತ ಪಾತ್ರಿ ಕೋಟಿ ಪೂಜಾರಿ ಮತ್ತು ಹಿರಿಯ ಪಾತ್ರಿ ಶ್ಯಾಮರಾಯ ಪೂಜಾರಿ ಅವರನ್ನು ಎಲ್ಲರ ಉಪಸ್ಥಿತಿಯಲ್ಲಿ ಗೌರವಿಸಲಾಗಿದೆ.
ಕಳೆದ ಸುಮಾರು ಸಮಯದಿಂದ ಈ ಬಗ್ಗೆ ಚಿಂತನೆ, ಬೈದೆರ್ಲು, ಪಂಚಧೂಮಾವತಿ ದೇವರುಗಳ ಆಶೀರ್ವಾದ ಅಭಯವನ್ನು ಹಿರಿಯರು, ಗುರಿಕಾರರು, ಜೀರ್ಣೋದ್ಧಾರ ಸಮಿತಿ ಮತ್ತು ಇತರ ವಿಭಾಗದ ಸರ್ವರೂ, ಒಮ್ಮತದಿಂದ ಈ ಪುಣ್ಯದ ಕಾರ್ಯವನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಈಗಾಗಲೇ ತಾ.15.03.2026 ರಂದು ಊರ ಹಾಗೂ ಪರವೂರ ಸದ್ಭಕ್ತರು ಸೇರಿಕೊಂಡು ಕರಸೇವೆ ಪ್ರಾರಂಭಗೊಂಡಿದೆ.
ಇದೀಗ ತುಳುನಾಡÀ ವೀರ ಪುರುಷರಾದ “ನಂಬುನಕ್ಲೆಗ್ ಇಂಬು ಕೊರ್ಪ, ಸತ್ಯ ಗೆಂದಾದ್ ಕೊರ್ಪ” ಎಂಬ ನುಡಿಯಿಂದ ಸದಾ ಹರಸಲಿ ಎಂದು ತಾ. 01.04.2026ರಂದು ಬುಧವಾರ ಸಮಯ ಬೆಳಿಗ್ಗೆ 9.50 ಗಂಟೆಗೆ ಗರೋಡಿಯ ಸಂಪೂರ್ಣ ಪುನರ್ ನಿರ್ಮಾಣದ ಪ್ರಯುಕ್ತ ಶಿಲಾನ್ಯಾಸ ಮತ್ತು ಮುಷ್ಟಿ ಕಾಣಿಕೆಯನ್ನು ನಿರ್ಧರಿಸಲಾಗಿದೆ.
ತೋನ್ಸೆ ಪರಿಸರದ ಉದ್ಯಮಿಗಳು, ಮುಂಬಯಿಯಲ್ಲಿನ ಹಿತೈಷಿ-ಅಭಿಮಾನಿಗಳು, ಟ್ರಸ್ಟ್ನ ಸದಸ್ಯರುಗಳು ನಮ್ಮೊಂದಿಗೆ ಸಹಕರಿಸಬೇಕಾಗಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರಡಿ ಸೇವಾ ಟ್ರಸ್ಟ್ಟ್, ಮುಂಬಯಿ ಪರವಾಗಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಉಪಾಧ್ಯಕ್ಷರುಗಳಾದ ಡಿ.ಬಿ ಅಮೀನ್, ಸಿ.ಕೆ ಪೂಜಾರಿ, ವಿಶ್ವನಾಥ್ ತೋನ್ಸೆ, ಗೌ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಗೌ| ಕೋಶಾಧಿಕಾರಿ ರವಿರಾಜ್ ಕಲ್ಯಾಣ್ಪುರ, ಜತೆ ಕಾರ್ಯದರ್ಶಿ ಕರುಣಾಕರ್ ಬಿ.ಪೂಜಾರಿ, ಜತೆ ಕೋಶಾಧಿಕಾರಿ ವಿಜಯ್ ಸನಿಲ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು, ಸಲಹೆಗಾರರು ಮತ್ತು ಮಹಿಳಾ ವಿಭಾಗ ಮತ್ತು ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.
ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ:
ಅನಾದಿಕಾಲದಿಂದ ಭಕ್ತಿ ಶ್ರದ್ಧೆಯ ಬೀಡಾದ ಜನಪದ ಪ್ರತೀತಿಯ 66 ಪ್ರಾಚೀನ ಗರಡಿಗಳಲ್ಲಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರಡಿಯು ಒಂದು. ಭಕ್ತರ ರಕ್ಷಣೆಗಾಗಿ ದುಷ್ಟರ ಸಂಹಾರಕ್ಕಾಗಿ ಅವತರಿಸಿದ ತುಳುನಾಡ ವೀರ ಪುರುಷರಾದ ಕೋಟಿ ಚೆನ್ನಯರು ಮತ್ತು ಅವರ ಆರಾಧ್ಯ ದೈವರಾದ ಶ್ರೀ ಬ್ರಹ್ಮ ಬೈದರನ್ನು ನಂಬಿ ಪೂಜಿಸುತ್ತಿದ್ದು, ಊರ ಪರವೂರ ಜನರ ಇಷ್ಟಾರ್ಥವನ್ನು ಪೂರೈಸುತ್ತಾ, ಪ್ರಕೃತಿ ಮಾತೆಯ ಸುಂದರ ಮಡಿಲಲ್ಲಿ ಹಸಿರು ಬಯಲಿನ ಮಧ್ಯದಲ್ಲಿ, ಸುವರ್ಣ ನದಿಯ ತೀರದಲ್ಲಿ ನೆಲೆಸಿರುವ ಆಸ್ತಿಕ ಶ್ರದ್ದಾ ಕೇಂದ್ರ ತೋನ್ಸೆ ಗರಡಿ. ಇದೀಗ ಹಲವು ಕಾಲದಿಂದ ಭೌತಿಕ ಸವೆತ, ಪ್ರಕೃತಿಯ ವಿಕೋಪಕ್ಕೆ ಒಳಗೊಂಡು ಶಿಥಿಲಗೊಂಡಿರುವ ಈ ಗರಡಿಯ ಪುನರ್ ನಿರ್ಮಾಣ ಅನಿವಾರ್ಯವಾಗಿದೆ. ಪುನರ್ ನಿರ್ಮಾಣಕ್ಕೆ ಅಂದಾಜು ವೆಚ್ಚ ರೂ. 7.5 ಕೋಟಿ ಎಂದು ಅಂದಾಜಿಸಲಾಗಿದೆ.
ಜನ್ಮಭೂಮಿಯನ್ನು ತೊರೆದು ಮರಾಠಿ ಮಣ್ಣಿನ ಕರ್ಮಭೂಮಿಯಲ್ಲಿ ಮಾತ್ರವಲ್ಲದೆ ಜಗತ್ತಿನ ವಿವಿದೆಡೆ ನೆಲೆಸಿ, ತಾನ್ನಾಡಿನ ಪ್ರತಿಯೊಂದು ಶುಭ ಕಾರ್ಯದಲ್ಲಿ ಸ್ಪಂದಿಸಿ, ಕೈಜೋಡಿಸಿ ಸಹಕರಿಸುತ್ತಿರುವ ದಾನಿಗಳ ಸಹಕಾರ ತುಂಬಾ ಪ್ರಾಮುಖ್ಯ. ಶ್ರೀ ಬ್ರಹ್ಮ ದೈವರ್ಕಳ ಪಂಚಧೂಮಾವತಿ ಗರೋಡಿಯ ಪುನರ್ ನಿರ್ಮಾಣದ ಶುಭ ಪರ್ವಕಾಲವು ಇದೀಗ ಒದಗಿ ಬಂದಿರುವುದು ನಮ್ಮೆಲ್ಲರ ಪೂರ್ವ ಜನ್ಮದ ಪುಣ್ಯದ ಫಲವೇ ಸರಿ. ಇದು ನಮಗೆ ಬಂದ ಸುವರ್ಣಾವಕಾಶವೆಂದು ತಿಳಿದು ತಾವೆಲ್ಲರೂ ಈ ಪುಣ್ಯ ಸೇವಾ ಕೈಂಕರ್ಯದಲ್ಲಿ ತನು-ಮನ-ಧನದೊಂದಿಗೆ ಸಹಕರಿಸಬೇಕಾಗಿ ಕೃತಜ್ಞತಾಪೂರ್ವಕವಾಗಿ ವಿನಂತಿಸುತ್ತಿದ್ದೇವೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now