
ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ 54ನೇ ವರ್ಷದ ಕಾರ್ಯಕ್ರಮ
ಪುರಾಣ ವಾಚನ-ಪ್ರವಚನ ಎಂಬುದು ಜ್ಞಾನಯಜ್ಞ, ಜ್ಞಾನಸತ್ರ : ಡಾ| ಶಾಂತರಾಮ ಪ್ರಭು
ಮುಂಬಯಿ, ಜು.16: ಪುರಾಣ ಅಂದರೆ ಭಗವಂತನ ಕಥೆ. ಪುರಾಣ ವಾಚನ-ಪ್ರವಚನ ಎಂಬುದು ಜ್ಞಾನ ಯಜ್ಞ ಹಾಗೂ ಜ್ಞಾನ ಸತ್ರವಾಗಿದ್ದು ಆಸಕ್ತಿ ಮತ್ತು ತನ್ಮಯತೆಯೊಂದಿಗೆ ಶ್ರದ್ಧಾ-ಭಕ್ತಿಯಿಂದ ಪುರಾಣ ವಾಚನ-ಪ್ರವಚನ ಶ್ರವಣದಿಂದ ಪ್ರತಿಯೊಬ್ಬರ ಮನದಲ್ಲೂ, ಮನೆಯಲ್ಲೂ ಸುಖ, ಶಾಂತಿ-ನೆಮ್ಮದಿ ನೆಲೆಸಿ ಆರೋಗ್ಯಪೂರ್ಣ ಸಮಾಜ
ನಿರ್ಮಾಣವಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ ಡಾ| ಶಾಂತರಾಮ ಪ್ರಭು ನಿಟ್ಟೂರು ಹೇಳಿದರು.
ಇಂದಿಲ್ಲಿ ಬುಧವಾರ ಧರ್ಮಸ್ಥಳದಲ್ಲಿ ಪ್ರವಚನಮಂಟಪದಲ್ಲಿ 54ನೇ ವರ್ಷದ ಪುರಾಣ ವಾಚನ-ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಡಾ| ಪ್ರಭು ಮಾತನಾಡಿದರು.

ಮಹಾಭಾರತ ಕಥೆ ಕೇಳಿ ಕುಷ್ಠ ರೋಗ ನಿವಾರಣೆಯಾಗಿದೆ ಎಂದು ಪುರಾಣದಿಂದ ತಿಳಿದು ಬಂದಿದೆ. ಪುರಾಣ ವಾಚನ-ಪ್ರವಚನವನ್ನು ಶ್ರದ್ಧಾ-ಭಕ್ತಿಯಿಂದ ಆಲಿಸುವ ಸತ್ಸಂಗದಿಂದ ಪರಸ್ಪರ ಪ್ರೀತಿ-ವಿಶ್ವಾಸ, ಭ್ರಾತೃತ್ವ, ದಯೆ, ಅನುಕಂಪ ಮೊದಲಾದ ಮಾನವೀಯಮೌಲ್ಯಗಳು ಉದ್ದೀಪನಗೊಂಡು ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದೂ ಡಾ| ಪ್ರಭು ಅಭಿಪ್ರಾಯಪಟ್ಟರು.
ಡಿ.ಹರ್ಷೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ ಮಾತನಾಡಿ, ಓದುವ ಹವ್ಯಾಸದಿಂದ ನಮ್ಮ ಜ್ಞಾನಕ್ಷಿತಿಜ ವಿಸ್ತಾರವಾಗುತ್ತದೆ. ಊರಿನವರು ಹಾಗೂ ಧರ್ಮಸ್ಥಳಕ್ಕೆ ಬರುವ ಭಕ್ತರು ಕೂಡಾ ಪುರಾಣ ವಾಚನ-ಪ್ರವಚನದ ಸದುಪಯೋಗ ಪಡೆದು ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು

ದೇವಳದ ಪಾರುಪತ್ಯಹಾರರಾದ ಲಕ್ಷ್ಮೀನಾರಾಯಣ ರಾವ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ ಶೆಟ್ಟಿ, ಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾದ ಪುರಂದರ ಭಟ್, ಉದಯಕುಮಾರ್ ಜೈನ್, ಚಂದ್ರಕಾಂತ್, ಮಹಾವೀರ ಅಜ್ರಿ, ಸಂತೋಷ್, ಭುಜಬಲಿ ಧರ್ಮಸ್ಥಳ ಮೊದÀಲಾದವರು ಉಪಸ್ಥಿತರಿದ್ದರು.
ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಶಿಕ್ಷಕ ನಿಶಾಂತ್ ಧನ್ಯವಾದವಿತ್ತರು.

ಕುಮಾರವ್ಯಾಸ ವಿರಚಿತ `ಕರ್ಣಾಟ ಭಾರತ ಕಥಾಮಂಜರಿ’ ಬಗ್ಗೆ ಗಣಪತಿ ಪದ್ಯಾಣ ವಾಚನÀಕಾರರಾಗಿ ಹಾಗೂ ಉಜಿರೆ ಅಶೋಕ ಭಟ್ ಪ್ರವಚನಕಾರರಾಗಿ ಸಹಕರಿಸಿದರು. ಸೆಪ್ಟೆಂಬರ್ 16ರ ವರೆಗೆ ಎರಡು ತಿಂಗಳು ಪ್ರತಿದಿನ ಸಂಜೆ ಗಂಟೆ 6.30 ರಿಂದ ರಾತ್ರಿ 8.00ರ ವರೆಗೆ ಪುರಾಣ ವಾಚನ-ಪ್ರವಚನ ನಡೆಯಲಿದೆ.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























