
ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಹಾಗೂ ಕರಾವಳಿ ಭಾಗದ ಹೆಮ್ಮೆಯ ‘ಅಪ್ಪೆಮಿಡಿ’ ಮಾವಿನ ತಳಿಗೆ ಭಾರತೀಯ ಸ್ಪೈಸಸ್ ಬೋರ್ಡ್ (Spices Board of India) ಮಾನ್ಯತೆ ನೀಡುವಂತೆ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಹಾಗೂ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಅಘನಾಶಿನಿ ಕಣಿವೆಯ ಅಪ್ಪೆಮಿಡಿ ಕುರಿತು ಅಧ್ಯಯನ ನಡೆಸಿರುವ ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಆಶೀಸರ, ಡಾ. ಬಾಲಚಂದ್ರ ಸಾಯಿಮನೆ ಹಾಗೂ ಸ್ಪೈಸಸ್ ಬೋರ್ಡ್ ಸದಸ್ಯ ಪ್ರಸನ್ನ ಕೆರೆಕೈ ಅವರ ಮನವಿ ಹಿನ್ನೆಲೆಯಲ್ಲಿ ಈ ವಿಷಯವನ್ನು ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ.
ಅಪ್ಪೆಮಿಡಿಗೆ ಸ್ಪೈಸಸ್ ಬೋರ್ಡ್ ಮಾನ್ಯತೆ ದೊರೆತರೆ ಮಲೆನಾಡಿನ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ, ಬೆಂಬಲ ಬೆಲೆ ಹಾಗೂ ಅಪ್ಪೆಮಿಡಿ ಉಪ್ಪಿನಕಾಯಿಗೆ ವಿದೇಶಿ ಮಾರುಕಟ್ಟೆ ವಿಸ್ತರಿಸುವ ಅವಕಾಶ ಸಿಗಲಿದೆ. ಜೊತೆಗೆ, ಅಪ್ಪೆಮಿಡಿಗೆ ಭೌಗೋಳಿಕ ಸೂಚಕ (GI Tag) ಪಡೆಯುವ ಪ್ರಕ್ರಿಯೆಗೂ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈ ಮೂಲಕ ಉತ್ತರ ಕನ್ನಡದ ವಿಶಿಷ್ಟ ಅಪ್ಪೆಮಿಡಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಗುರುತಿನ ಜೊತೆಗೆ ರೈತರಿಗೆ ಆರ್ಥಿಕ ಲಾಭವಾಗುವ ನಿರೀಕ್ಷೆ ವ್ಯಕ್ತವಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now