ತೊಟ್ಟಂ ಚರ್ಚಿನಿಂದ ವರ್ಗಾವಣೆಗೊಂಡ ವಂ|ಡೆನಿಸ್ ಡೆಸಾ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ತೊಟ್ಟಂ ಚರ್ಚಿನಿಂದ ವರ್ಗಾವಣೆಗೊಂಡ ವಂ|ಡೆನಿಸ್ ಡೆಸಾ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

0Shares

ಉಡುಪಿ: ಜಾತಿ ಧರ್ಮದ ಗೋಡೆಗಳನ್ನು ಕೆಡವಿ ಸರ್ವ ಜನಾಂಗದ ಶಾಂತಿಯ ತೋಟವನ್ನು ಕಟ್ಟುವ ವಿಶೇಷ ಸಾಧನೆಯನ್ನು ಮಾಡುವ ಮೂಲಕ ತೊಟ್ಟಂ ಪರಿಸರ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಇದಕ್ಕೆ ಪ್ರಮುಖ ಕಾರಣಕರ್ತರಾದವರು ತೊಟ್ಟಂ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಎಂದು ಸರ್ವಧರ್ಮ ಸಮನ್ವಯ ಸಮಿತಿಯ ಅಧ್ಯಕ್ಷರಾದ ರಮೇಶ್ ತಿಂಗಳಾಯ ಅಭಿಪ್ರಾಯಪಟ್ಟರು.
ಅವರು ಭಾನುವಾರು ಸತತ ನಾಲ್ಕು ವರ್ಷಗಳ ಸೇವೆಯನ್ನು ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಸಲ್ಲಿಸಿ ಪ್ರಸ್ತುತ ಉಡುಪಿ ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರುಗಳಾಗಿ ವರ್ಗಾವಣೆಗೊಂಡ ವಂ|ಡೆನಿಸ್ ಡೆಸಾ ಅವರಿಗೆ ತೊಟ್ಟಂ ಚರ್ಚಿನ ಪರವಾಗಿ ಭಾನುವಾರ ಸರ್ವ ಧರ್ಮಿಯರ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲೆಲ್ಲೋ ಇದ್ದ ಬೇರೆ ಬೇರೆ ಧರ್ಮದ ವ್ಯಕ್ತಿಗಳನ್ನು ಒಗ್ಗೂಡಿಸಿ ಪರಸ್ಪರ ಹತ್ತಿರ ಬರುವಂತೆ ಮಾಡಲು ವಂ|ಡೆನಿಸ್ ಡೆಸಾ ಅವರು ಸರ್ವಧರ್ಮ ಸಮನ್ವಯ ಸಮಿತಿಯ ಮೂಲಕ ಮುನ್ನುಡಿ ಬರೆದರು. ಅವರ ಪ್ರಯತ್ನದ ಫಲವಾಗಿ ಇಂದು ಸೌಹಾರ್ದ ಪರಿಸರ ನಿರ್ಮಾಣಕ್ಕೆ ಸಾಧ್ಯವಾಗಿದೆ. ಅವರು ಹಾಕಿದ ಸೌಹಾರ್ದತೆಯ ಮುನ್ನುಡಿ ಮುಂದೆಯೂ ಮುಂದುವರೆಯಲಿ ಎಂದರು.
ಚರ್ಚ್ ಪಾಲನಾ ಮಂಡಳಿ, ಸಮನ್ವಯ ಸರ್ವಧರ್ಮ ಸಮಿತಿ, ಜಮಾತೆ ಇ ಇಸ್ಲಾಮಿ ಹಿಂದ್ ಸಂಘಟನೆ, ಚರ್ಚಿನ ವಿವಿಧ ವಾಳೆಗಳು, ಸಂಘಟನೆಗಳು ಹಾಗೂ ಧರ್ಮಭಗಿನಿಯರ ಪರವಾಗಿ ವಂ|ಡೆನಿಸ್ ಡೆಸಾ ಅವರಿಗೆ ಗೌರವ ಸಲ್ಲಿಸಲಾಯಿತು.
ವಿದಾಯ ಸಮಾರಂಭದ ಗೌರವ ಸ್ವೀಕರಿಸಿ ಮಾತನಾಡಿದ ವಂ|ಡೆನಿಸ್ ಡೆಸಾ ಅವರು ತೊಟ್ಟಂ ಚರ್ಚಿನಲ್ಲಿ ನನಗೆ ಸೇವೆ ಸಲ್ಲಿಸಲು ಅವಕಾಶ ಲಭಿಸಿತು ದೇವರು ತನ್ನೊಡನೆ ಇದ್ದು ಮುನ್ನಡೆಸುವುರೊಂದಿಗೆ ಚರ್ಚಿನ ಭಕ್ತವೃಂದದ ಸಹಕಾರದಿಂದ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ವರ್ಗಾವಣೆಗೊಂಡು ತೆರಳುವಾಗ ಚರ್ಚಿನಲ್ಲಿ ನಾಯಕತ್ವ, ಸೇವಾ ಮನೋಭಾವನೆಯ ಗುಣಗಳನ್ನು ಬೆಳೆಸಿದ ತೃಪ್ತಿಯೊಂದಿಗೆ ಹೋಗುತ್ತಿರುವುದಾಗಿ ಹೇಳಿದರು. ನಾಲ್ಕು ವರ್ಷದ ಅವಧಿಯಲ್ಲಿ ತನಗೆ ನೀಡಿದ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಚರ್ಚಿನ ಪರವಾಗಿ ಫೆಲಿಶಾ ಡಿ ಆಲ್ಮೇಡಾ, ವೆನಿಸಾ ಪಿಂಟೊ, ಬ್ಲೆಸಿಲ್ಲಾ ಕ್ರಾಸ್ತಾ, ದೊನಾತ್ ಡಿ’ಆಲ್ಮೇಡಾ ಮತ್ತು ಜೇನ್ ಡಿಸೋಜಾ ಧರ್ಮಗುರುಗಳ ಸೇವೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಕಾನ್ವೆಂಟಿನ ಮುಖ್ಯಸ್ಥರಾದ ಸಿಸ್ಟರ್ ಸುಶ್ಮಾ ಲೂವಿಸ್, ಸಿಎಸ್ ಐ ಎಬೆನೇಜರ್ ಚರ್ಚ್ ಮಲ್ಪೆ ಇದರ ಸಭಾ ಪಾಲಕರಾದ ವಂ|ಕುಮಾರ್ ಸಾಲಿನ್ಸ್, ಚರ್ಚ್ ಪಾಲನಾ ಸಮಿತಿಯ 20 ಆಯೋಗಗಳ ಸಂಯೋಜಕಿ ಶಾಂತಿ ಫೆರ್ನಾಂಡಿಸ್ ಉಪಸ್ಥಿಮತರಿದ್ದರು.
ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್ ಸ್ವಾಗತಿಸಿ, ಉಪಾಧ್ಯಕ್ಷರಾದ ಲೆಸ್ಲಿ ಆರೋಜಾ ವಂದಿಸಿದರು. ಕ್ಲಾರೆನ್ಸ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ತೊಟ್ಟಂ ಚರ್ಚಿನ ನೂತನ ಧರ್ಮಗುರುಗಳಾಗಿ ಪ್ರಸ್ತುತ ಅಜೆಕಾರು ಪವಿತ್ರ ಹೃದಯ ಚರ್ಚಿನ ಧರ್ಮಗುರು ವಂ|ಹೆನ್ರಿ ಮಸ್ಕರೇನ್ಹಸ್ ಮೇ ಮೊದಲ ವಾರದಲ್ಲಿ ಅಧಿಕಾರ ವಹಿಸಲಿದ್ದಾರೆ.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now