
ದೋಹಾ, ಕತಾರ್: ಕರ್ನಾಟಕ ಸಂಘ ಕತಾರ್ (KSQ), ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಕತಾರಿನ ಭಾರತೀಯ ದೂತಾವಾಸದ ಆಶ್ರಯದಲ್ಲಿ, ಶುಕ್ರವಾರ, ಮೇ 1ರಂದು ಪರ್ಲಿಂಗ್ ಸ್ಪೋರ್ಟ್ಸ್ ಅಕಾಡೆಮಿ, ದೋಹಾದಲ್ಲಿ “ಕಾರ್ಮಿಕ ದಿನಾಚರಣೆ 2026” ಅನ್ನು ಯಶಸ್ವಿಯಾಗಿ ಆಯೋಜಿಸಿತು. “ಕಾಯಕವೇ ಕೈಲಾಸ” ಎಂಬ ವಿಷಯದೊಂದಿಗೆ ನಡೆದ ಈ ಕಾರ್ಯಕ್ರಮ ಕಾರ್ಮಿಕರು, ಗಣ್ಯರು ಹಾಗೂ ಸಮುದಾಯವನ್ನು ಒಗ್ಗೂಡಿಸಿತು.
ಇದು ಕರ್ನಾಟಕ ಸಂಘದ ನೂತನ ಆಡಳಿತ ಸಮಿತಿಯ ಪ್ರಪ್ರಥಮ ಕಾರ್ಯಕ್ರಮವಾಗಿದ್ದು, ಎಲ್ಲರಿಂದ ಪ್ರಶಂಸೆಗೆ ಪಾತ್ರವಾಯಿತು.
ಕರ್ನಾಟಕ ಸಂಘದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಸುಬ್ರಮಣ್ಯ ಹೆಬ್ಬಗಿಲು ಅವರು ಸ್ವಾಗತ ಭಾಷಣದಲ್ಲಿ “ಕರ್ನಾಟಕ ಸಂಘವು ಕಾರ್ಮಿಕರಿಗೆ ಸ್ವಗೃಹದಂತಿರುವ ಸಂಘ” ಎಂದು ತಿಳಿಸಿದರು. ಮುಖ್ಯ ಅತಿಥಿಗಳಾದ ಡಾ. ವೈಭವ್ ತಾಂಡಲೆ, ಭಾರತೀಯ ದೂತಾವಾಸ ಕಾರ್ಯಾಲಯದ ರಾಯಭಾರಿ ಚಟುವಟಿಕೆಗಳ ಮುಖ್ಯಸ್ಥರು, ಶ್ರೀ ಖಾಲಿದ್ ಅಬ್ದುಲ್ ರಹ್ಮಾನ್ ಫಖ್ರೂ, ಕಾರ್ಮಿಕ ಸಚಿವಾಲಯ, ಕತಾರ್, ಶ್ರೀ ಮಣಿಕಂಟನ್ ಎ ಪಿ (ICC ಅಧ್ಯಕ್ಷರು), ಶ್ರೀ ಪಿ ಎನ್ ಬಾಬುರಾಜನ್ (ICC ಸಲಹಾ ಸಮಿತಿ ಅಧ್ಯಕ್ಷರು) ಹಾಗೂ ಶ್ರೀ ಫೈಸಲ್ ಅಲ್ ಹುಡಾವಿ ಕಾರ್ಯಕ್ರಮವನ್ನು ಪ್ರಶಂಸಿಸಿ, ಕಾರ್ಮಿಕರ ಕೊಡುಗೆ, ಕಲ್ಯಾಣ ಹಾಗೂ ಸುರಕ್ಷತೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಲು, ಸಮುದಾಯದ ಹಿರಿಯ ಮುಖಂಡರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಆಗಮಿಸಿದ್ದರು. ಪ್ರಮುಖವಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರ, ಭಾರತೀಯ ಸಮುದಾಯ ಹಿತೈಷಿ ವೇದಿಕೆ ಹಾಗು ಭಾರತೀಯ ಕ್ರೀಡಾ ಕೇಂದ್ರದ ಮುಖಂಡರು ಉಪಸ್ಥಿತರಿದ್ದರು. ಕರ್ನಾಟಕ ಸಂಘ ಕತಾರಿನ ಸಲಹಾ ಸಮಿತಿಯ ಸದಸ್ಯರು ಹಾಗು ಪೂರ್ವ ಅಧ್ಯಕ್ಷರುಗಳಾದ ಶ್ರೀ ಅರುಣ್ ಕುಮಾರ್, ಶ್ರೀ ವೀರೇಶ್ ಮನ್ನಂಗಿ, ಶ್ರೀ ಹೆಚ್.ಕೆ. ಮಧು ಹಾಗೂ ಶ್ರೀ ಸಂಜಯ್ ಕುದುರಿ, ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷೆ ಶ್ರೀಮತಿ ಮಿಲನ್ ಅರುಣ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡಿಗರ ಪ್ರತಿನಿಧಿಯಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಸಂದೀಪ್ ರೆಡ್ಡಿ ಅವರು, ಹಾಗೂ ಕರ್ನಾಟಕ ಮೂಲದ ಸಹೋದರ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಿ, ಸಕ್ರೀಯವಾಗಿ ಪಾಲ್ಗೊಂಡು, ಕರ್ನಾಟಕ ಸಂಘ ಕತಾರಿನ ಒಗ್ಗಟ್ಟನ್ನು ಎತ್ತಿ ಹಿಡಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಶ್ರೀ ಮಣಿಭಾರತಿಯವರ ಮುಂದಾಳತ್ವದಲ್ಲಿ ಹಲವು ಕಾರ್ಮಿಕರಿಗೆ ICBF ಜೀವವಿಮೆ ಸೌಲಭ್ಯವನ್ನು ವಿತರಿಸಲಾಯಿತು ಹಾಗು ಬೇಸಿಗೆಗಾಗಿ ಕೋಲ್ಡ್ ವಾಟರ್ ಉಳಿಸುವ ಕೂಲರ್ ಬಾಟಲ್ಗಳನ್ನು ಆಗಮಿಸಿದ್ದ ಎಲ್ಲಾ ಕಾರ್ಮಿಕರಿಗೆ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಮಿಕರನ್ನು ಆಕರ್ಷಿಸಿ ಮನೋರಂಜನೆ ನೀಡಿತು.
ಡಾ. ಕಾಂತರಾಜ್ ಅವರು ಆರೋಗ್ಯದ ಬಗ್ಗೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿದರು.
ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸುಜಿತ್ ಕುಮಾರ್ ಅವರು ಎಲ್ಲರಿಗೂ ಧನ್ಯವಾದವನ್ನು ತಿಳಿಸಿ ವಂದನಾರ್ಪಣೆ ಸಲ್ಲಿಸಿದರು. ಕೇಕ್ ಕತ್ತರಿಸಿ ಸಿಹಿ ಹಂಚಿದ ನಂತರ ಭೋಜನ ವಿತರಿಸಿ ಕಾರ್ಯಕ್ರಮ ಸಮಾರೋಪಗೊಂಡಿತು.
ಕರ್ನಾಟಕ ಸಂಘ ಕತಾರ್ ವತಿಯಿಂದ ಕೃತಜ್ಞತೆ
ಕರ್ನಾಟಕ ಸಂಘ ಕತಾರ್, ಭಾರತೀಯ ದೂತಾವಾಸ, ದೋಹಾ ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರ, ಕತಾರ್ ಅವರ ನಿರಂತರ ಹಾಗೂ ಸ್ಥಿರ ಬೆಂಬಲಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಈ ಕಾರ್ಯಕ್ರಮದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದ ಬೆಂಬಲದಾರರಾದ ಶ್ರೀ ಥಾಮಸ್ ಚೆರಿಯನ್ (ನಾಸರ್ ಬಿನ್ ಖಾಲಿದ್ ಅಂಡ್ ಸನ್ಸ್ ಟ್ರೇಡಿಂಗ್ ಕಂ.), ಶ್ರೀ ಮುಸ್ತಫಾ (ಗಲ್ಫ್ ಪ್ಲಾಂಟ್ ಟ್ರೇಡಿಂಗ್ & ಕಾಂಟ್ರಾಕ್ಟಿಂಗ್ ಡಬ್ಲ್ಯು.ಎಲ್.ಎಲ್.), ಹಾಗೂ ಶ್ರೀ ಮೊಹಮ್ಮದ್ ಸಲೀಮ್ (ಟೀಮ್ ಎಂಜಿನಿಯರಿಂಗ್ & ಕಾಂಟ್ರಾಕ್ಟಿಂಗ್ ಡಬ್ಲ್ಯು.ಎಲ್.ಎಲ್.) ಅವರಿಗೆ ಸಂಘ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ. ಜೊತೆಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ರೂಪಿಸಲು ಶ್ರಮಿಸಿದ ಎಲ್ಲಾ ಸ್ವಯಂಸೇವಕರು, ಸದಸ್ಯರು ಹಾಗೂ ಹಿತೈಷಿಗಳಿಗೆ ಕರ್ನಾಟಕ ಸಂಘ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ನಮ್ಮ ವರದಿಗಾರರು
ಸ್ಟೀವನ್ ಕುಲಾಸೊ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now