
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ಪಾವಂಜೆ ಬಳಿ ಸರಣಿ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡು ಯುವತಿ ಸಾವನ್ನಪ್ಪಿದ್ದಾರೆ. ಬಂಗ್ರಕೂಳೂರು ನಿವಾಸಿ, ಶೃತಿ ಆಚಾರ್ಯ (27) ಮೃತ ಸ್ಕೂಟರ್ ಸವಾರೆ.
ಅಪಘಾತ ನಡೆದ ಸ್ಥಳದಲ್ಲಿದ್ದ ಮೃತ ಶೃತಿ ಆಚಾರ್ಯ ತಂದೆ ಗೋಪಾಲ ಆಚಾರ್ಯ(53) ಹಾಗೂ ಬಳಿಯಲ್ಲೇ ನಿಂತಿದ್ದ ಮಹಿಳೆ ಕೈರುನ್ನಿಸಾ (52) ರವರಿಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಮಳೆ ಬರುತ್ತಿದ್ದ ಕಾರಣ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಸಮೀಪದ ಪಾವಂಜೆ ಬಳಿ ಸ್ಕೂಟರ್ ಹಾಗೂ ಬೈಕ್ ಸವಾರರು ಹೆದ್ದಾರಿ ಬದಿಯ ಮಣ್ಣಿನ ರಸ್ತೆಯಲ್ಲಿ ರೈನ್ ಕೋಟ್ ಹಾಕಲು ನಿಲ್ಲಿಸಿದ್ದಾರೆ.
ಈ ವೇಳೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿ ನಿಲ್ಲಿಸಿದ್ದ ಬೈಕ್ ಹಾಗೂ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.
ಅದರಲ್ಲೂ ಸ್ಕೂಟರನ್ನು ಸವಾರೆ ಶೃತಿ ಸಮೇತ ಇನ್ನೋವಾ ಕಾರು ಎಳೆದುಕೊಂಡು ಹೋಗಿ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಸಿಮೆಂಟ್ ಸ್ಲಾಬ್ ಗೆ ಡಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡ ಶೃತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತ ಶೃತಿ ಆಚಾರ್ಯ ಚೆನ್ನೈನಲ್ಲಿ ಸಾಪ್ಟರ್ ಉದ್ಯೋಗಿಯಾಗಿದ್ದು, ಕಳೆದ 15 ದಿನಗಳ ಹಿಂದೆ ತನ್ನ ಸಹೋದರ ನಿಧನರಾಗಿದ್ದು, ಅವರ ಅಂತಿಮ ಕಾರ್ಯಕ್ರಮಗಳಿಗೆ ಊರಿಗೆ ಬಂದಿದ್ದರು. ಕೆಲಸದ ನಿಮಿತ್ತ ತಂದೆಯ ಜೊತೆ ಕಿನ್ನಿಗೋಳಿ ಬ್ಯಾಂಕಿಗೆ ಹೋಗಿ ಬಂದು ಪಾವಂಜೆ ದೇವಸ್ಥಾನದಲ್ಲಿ ಊಟ ಮಾಡಿ ವಾಪಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now