ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ : ವರ್ಷದ ಗೌರವ ಮತ್ತು ಪುಸ್ತಕ ಪ್ರಶಸ್ತಿ ಪ್ರಧಾನ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ : ವರ್ಷದ ಗೌರವ ಮತ್ತು ಪುಸ್ತಕ ಪ್ರಶಸ್ತಿ ಪ್ರಧಾನ

0Shares

ಉಡುಪಿ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವಠಾರದಲ್ಲಿ 2025ರ ಸಾಲಿನ ಗೌರವ ಪ್ರಶಸ್ತಿ ಮತ್ತು 2025ರ ಪುಸ್ತಕ ಪುರಸ್ಕಾರ ಸಮಾರಂಭವು ಅದ್ದೂರಿಯಾಗಿ ಹಮ್ಮಿಕೊಂಡಿತ್ತು.

ಸಮಾರಂಭವನ್ನು ಉದ್ಘಾಟಿಸಿದ ಉಡುಪಿ ಧರ್ಮ ಪ್ರಾಂತ್ಯದ ವಿಶ್ರಾಂತ ಧರ್ಮಾದ್ಯಕ್ಷರಾದ ಅ. ವoದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ಜಾಗತಿಕ ಮತ್ತು ಅಂತರಾಷ್ಟ್ರೀಯ ಭಾಷೆಗಳ ನಡುವೆ ಪ್ರಾದೇಶಿಕ ಭಾಷೆಗಳ ಪ್ರಭಾವ ಕಡಿಮೆಯಾಗುತ್ತಿದೆಯಾದರೂ, ಕೊಂಕಣಿ ಸಾಹಿತ್ಯ ಅಕಾಡೆಮಿಯು ಭಾಷೆಯನ್ನು ಉಳಿಸುವಲ್ಲಿ ದೀಪದಂತೆ ಪ್ರಜ್ವಲಿಸಲು ಪ್ರಯತ್ನಿಸುತ್ತಿರುವುದು ಅಭಿನಂದನೀಯ. ಅಕಾಡೆಮಿಯ ನಿರಂತರ ಪ್ರಯತ್ನದಿಂದ ಕವಿ ಮತ್ತು ಸಾಹಿತಿಗಳ ಪ್ರಯತ್ನಕ್ಕೆ ಅತ್ಯಂತ ದೊಡ್ಡ ಗೌರವ ಸಿಗುತ್ತಿದೆ. ಕೊಂಕಣಿ ಭಾಷೆಯನ್ನು ಕೇವಲ ಪುರಾತನ ವಸ್ತುವಾಗಲು ಬಿಡಬೇಡಿ. ನಿಮ್ಮ ಮಕ್ಕಳು ಅತ್ಯಂತ ಹೆಮ್ಮೆಯಿಂದ ಕೊಂಕಣಿ ಭಾಷೆಯಲ್ಲಿ ಮಾತನಾಡುವಂತೆ ಅವರಿಗೆ ಉತ್ತೇಜನ ಕೊಡಿ. ಮಾತ್ರವಲ್ಲದೆ ಕೊಂಕಣಿ ಸಾಹಿತ್ಯವನ್ನು ಸೋಶಿಯಲ್ ಮಾಧ್ಯಮಗಳಲ್ಲೂ ಬಳಸುವಂತೆ ಮಾಡಿ. ಜಾಗತಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಬೆಳೆಯಲು ಬೇರೆ ಭಾಷೆಗಳು ನಮಗೆ ಅತ್ಯಂತ ಅಗತ್ಯವಾದರೂ, ನಮ್ಮ ಕೊಂಕಣಿ ಭಾಷೆಯು ನಮ್ಮ ಅಸ್ತಿತ್ವದ ಪ್ರಶ್ನೆಯಾಗಿದೆ ಎಂದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿo ಸ್ಟ್ಯಾನಿ ಆಲ್ವಾರಿಸ್ರವರು ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿ, ಇಂದಿನ ಯುವ ಪೀಳಿಗೆ ಕೊಂಕಣಿ ಭಾಷೆಯಿಂದ ದೂರ ಸರಿಯುವುದು ಭಾಷಾ ಅಭಿವೃದ್ದಿಗೆ ಕಂಟಕ ಪ್ರಾಯವಾಗಿದ್ದು, ಯುವ ಜನರು ಹಾಗೂ ವಿಧ್ಯಾರ್ಥಿಗಳಲ್ಲಿ ಕೊಂಕಣಿ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವಂತಹ ಕೆಲಸಗಳನ್ನು ಕೊಂಕಣಿಗರು ಮಾಡಬೇಕಾದ ಅಗತ್ಯತೆ ಇದೆ, ಆದುದರಿಂದ ನಾವೆಲ್ಲರೂ ಕೊಂಕಣಿಯ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ 2025ರ ಸಾಲಿನ ವರ್ಷದ ಗೌರವ ಪ್ರಶಸ್ತಿ ಪುರಸ್ಕೃತರಾದ ಕೊಂಕಣಿ ಸಾಹಿತ್ಯ ವಿಭಾಗದಲ್ಲಿ ರೊನ್ ರೊಚ್ ಕಾಸ್ಸಿಯಾ, ಕೊಂಕಣಿ ಕಲಾ ವಿಭಾಗದಲ್ಲಿ ರಾಮ್ ದಾಸ್ ದತ್ತಾತ್ರೇಯ ಗುಲ್ವಾಡಿ, ಕೊಂಕಣಿ ಜಾನಪದ ವಿಭಾಗದಲ್ಲಿ ಸೈರು ಮುರಳೀದರ ಪುತ್ತು ನಾಯ್ಕ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 2025 ನೇ ಸಾಲಿನ ವರ್ಷದ ಪುಸ್ತಕ ಪುರಸ್ಕೃತರಾದ ಕವಿತಾ ವಿಭಾಗದಲ್ಲಿ ಆoಡ್ರ್ಯೂ ಎಲ್. ಡಿಕುನ್ಹಾ, ಲೇಖನ ವಿಭಾಗದಲ್ಲಿ ರೋಷನ್ ಮೆಲ್ಕಿ ಸಿಕ್ವೇರಾ ಮತ್ತು ಸಣ್ಣಕಥೆ ವಿಭಾಗದಲ್ಲಿ ರಿಚಾರ್ಡ್ ಅಲ್ವಾರಿಸ್ರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಶೋಕ ಮಾತ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವo. ಚಾರ್ಲ್ಸ್ ಮಿನೇಜಸ್, ಉದ್ಯಾವರ ಚರ್ಚ್ ಧರ್ಮ ಗುರುಗಳಾದ ವo. ಅನಿಲ್ ಡಿಸೋಜಾ, ಬೀಚ್ ಹೀಲಿಂಗ್ ಹೋಮ್, ಹೂಡೆ ಇಲ್ಲಿನ ನಿರ್ದೇಶಕರಾದ ಡಾ. ಪ್ರೊಫೆಸರ್ ಮೊಹಮ್ಮದ್ ರಫೀಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಿದ್ದಿ, ಕುಡುಬಿ, ಖಾರ್ವಿ ಸಮುದಾಯಗಳ ಜಾನಪದ ನೃತ್ಯ, ಸನ್ ಶೈನ್ ಬ್ರಾಸ್ ಬ್ಯಾಂಡ್ ಹಾಗೂ ಉಡುಪಿ ಮತ್ತು ಮಂಗಳೂರು ಧರ್ಮ ಪ್ರಾಂತ್ಯದ ಪ್ರಮುಖ ಕಲಾವಿದರಿಂದ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ಪ್ರಸ್ತತಪಡಿಸಿದರು.

ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ದಯಾನಂದ್ ಮಡ್ಕೇಕರ್, ಸಪ್ನಾ ಕ್ರಾಸ್ತಾ, ಸುನೀಲ್ ಸಿದ್ದಿ ಹಾಗೂ ಮಾಮ್ದು ಇಬ್ರಾಹಿಂರವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಕಾರ್ಯ ನಿರೂಪಣೆಯನ್ನು ಪರಿಚಯ ಪಾoಬೂರು ಇದರ ಟ್ರಸ್ಟಿಗಳಾದ ಪ್ರಕಾಶ್ ನೊರೊನ್ಹಾ, ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ನಿಲಿಶಾ ಡಿಸೋಜ ಮತ್ತು ಸ್ಟೀವನ್ ಕುಲಾಸೊ ಉದ್ಯಾವರ ನಡೆಸಿದರು.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now