ಸಾವಿನಲ್ಲೂ ಸಾರ್ಥಕತೆ ಮೆರೆದ ಡಾ. ಶಾಂತಿ ನಾಯಕ: ದೇಹದಾನದ ಮೂಲಕ ಮಾದರಿಯಾದ ಮಹಾನ್ ಚೇತನ

ಸಾವಿನಲ್ಲೂ ಸಾರ್ಥಕತೆ ಮೆರೆದ ಡಾ. ಶಾಂತಿ ನಾಯಕ: ದೇಹದಾನದ ಮೂಲಕ ಮಾದರಿಯಾದ ಮಹಾನ್ ಚೇತನ

0Shares

ಹೊನ್ನಾವರ: ನಾಡಿನ ಹಿರಿಯ ಸಾಹಿತಿ, ಜನಪದ ತಜ್ಞೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷೆ ಡಾ. ಶಾಂತಿ ನಾಯಕ (85) ಅವರು ಶುಕ್ರವಾರ ರಾತ್ರಿ ವಯೋಸಹಜ ಕಾರಣದಿಂದ ಕೊನೆಯುಸಿರೆಳೆದಿದ್ದಾರೆ. ತಮ್ಮ ಕೊನೆಯ ಆಸೆಯಂತೆ, ಅವರ ದೇಹ ಮತ್ತು ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.

ಸಾರ್ಥಕ‌ ಅಂತ್ಯ: ದೇಹ ಮತ್ತು ಕಣ್ಣುಗಳ ದಾನ
ಡಾ. ಶಾಂತಿ ನಾಯಕ ಅವರ ಮಹತ್ತರ ನಿರ್ಧಾರಕ್ಕೆ ಗೌರವ ಸಲ್ಲಿಸಿದ ಕುಟುಂಬದವರು, ಅವರ ಇಚ್ಛೆಯಂತೆ ಶನಿವಾರ ಅವರ ಪಾರ್ಥೀವ ಶರೀರವನ್ನು ಕಾರವಾರದ ವೈದ್ಯಕೀಯ ಕಾಲೇಜಿಗೆ ದಾನವಾಗಿ ಹಸ್ತಾಂತರಿಸಿದರು. ಇದಕ್ಕೂ ಮುನ್ನ, ಶುಕ್ರವಾರ ರಾತ್ರಿಯೇ ಅವರ ಕಣ್ಣುಗಳನ್ನು ಕುಮಟಾದ ಲಯನ್ಸ್ ಚಾರಿಟೇಬಲ್ ಟ್ರಸ್ಟ್‌ನ ರೇವಣಕರ್ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಗಿತ್ತು. ಈ ಮೂಲಕ ವಿಜ್ಞಾನ ಮತ್ತು ಸಮಾಜಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ.

ಡಾ. ಶಾಂತಿ ನಾಯಕ ವ್ಯಕ್ತಿ ಪರಿಚಯ;
ಮೂಲತಃ ಅಂಕೋಲಾ ತಾಲೂಕಿನ ಬೇಲೆಕೇರಿಯವರಾಗಿದ್ದ ಶಾಂತಿ ನಾಯಕರು, ಹಿರಿಯ ಸಾಹಿತಿ ಡಾ. ಎನ್.ಆರ್. ನಾಯಕರ ಧರ್ಮಪತ್ನಿಯಾಗಿದ್ದರು. ಎಂ.ಎ. ಪದವೀಧರೆಯಾಗಿದ್ದ ಇವರು, ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಜಾನಪದ ಸಂಶೋಧನೆ ಹಾಗೂ ಬರಹಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತರಾಗಿದ್ದ ಅವರು, ಸಾಹಿತ್ಯ ಕ್ಷೇತ್ರಕ್ಕೂ ಹಲವಾರು ಕೃತಿಗಳ ಮೂಲಕ ಅಪಾರ ಕೊಡುಗೆ ನೀಡಿದ್ದರು. ಅವರ ಅಗಲಿಕೆ ಜಿಲ್ಲೆಯ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಶನಿವಾರ ಮುಂಜಾನೆಯಿಂದ ಬೆಳಿಗ್ಗೆ 11 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತಾಲೂಕಿನ ಗಣ್ಯರು, ಸಾಹಿತಿಗಳು, ಶಿಕ್ಷಣ ತಜ್ಞರು ಮತ್ತು ನೂರಾರು ಸಾರ್ವಜನಿಕರು ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now