ಠಾಗೋರರ ವಿಚಾರ ಪುಸ್ತಕ ಗಳಲ್ಲಿ ಹರಡಿಕೊಂಡಿವೆ: ಪ್ರೊ. ಗಣಪತಿ ಗೌಡ

ಠಾಗೋರರ ವಿಚಾರ ಪುಸ್ತಕ ಗಳಲ್ಲಿ ಹರಡಿಕೊಂಡಿವೆ: ಪ್ರೊ. ಗಣಪತಿ ಗೌಡ

0Shares

ಮಂಗಳೂರು, ಮೇ. 13: ಓದುವುದು ದಿನದಿಂದ ದಿನಕ್ಕೆ ಹೆಚ್ಚಾದರೆ ಲೋಕ ಜ್ಞಾನ ತಿಳಿಯಲು ಸಾಧ್ಯ. ಠಾಗೋರ್ ಕೇವಲ ಬರಹಗಾರ ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟಗಾರ, ಚಿಂತಕ ಕೂಡ ಹೌದು. ಅವರ ವಿಚಾರಧಾರೆಗಳನ್ನು ಅವರ ಬರಹಗಳಲ್ಲಿ ಕಾಣಬಹುದು ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಾಲಯದಲ್ಲಿ ಆಂತರಿಕ ಗುಣಮಟ್ಟ ಖಾತರಿಕೋಶ ಮತ್ತು ಇಂಗ್ಲಿಷ್ ಸಂಘದ ವತಿಯಿಂದ ರವೀಂದ್ರನಾಥ ಠಾಗೋರ್ ಜನ್ಮ ದಿನಾಚರಣೆ ಅಂಗವಾಗಿ ನಡೆದ ಗ್ರಂಥಾವಲೋಕನ, ಪುಸ್ತಕ ಪ್ರದರ್ಶನ ಮತ್ತು ಪುಸ್ತಕ ವಿಮರ್ಶೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇವರ ವಿಚಾರಗಳು ಕೇವಲ ಇವರ ಚಿಂತನೆಗಳಾಗಿರದೇ, ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಿದ್ದವು. ನೊಬೆಲ್ ಪ್ರಶಸ್ತಿ ವಿಜೇತ ಠಾಗೋರ್ ತಮ್ಮ ಜೀವನದ 40 ವರ್ಷಗಳನ್ನು ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮತ್ತು ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಮೀಸಲಿಟ್ಟಿದ್ದು ನಿಜಕ್ಕೂ ಸೋಜಿಗವೆನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ಸುಭಾಷಿಣಿ ಶ್ರೀವಸ್ತ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪುಸ್ತಕವನ್ನು ವಿಮರ್ಶಿಸಲಿಲ್ಲ, ಬದಲಾಗಿ ಒಬ್ಬ ಬರಹಗಾರ ಹಾಗೂ ಅವರ ನಿಲುವನ್ನು ಅಭಿವ್ಯಕ್ತಿಸಿದರು. ವಿಮರ್ಶೆಗೆ ಪುಸ್ತಕ ಎಷ್ಟು ಅಗತ್ಯವೋ ಹಾಗೆಯೇ ಒಬ್ಬ ಲೇಖಕನೂ ಅಷ್ಟೇ ಅಗತ್ಯ. ಅಂತಹ ಲೇಖಕರ ಸಾಲಿನಲ್ಲಿ ಠಾಗೋರ್ ಶ್ರೇಷ್ಠ ಸ್ಥಾನ ಪಡೆದುಕೊಳ್ಳುತ್ತಾರೆ ಎಂದು ಹೇಳಿ, ಪುಸ್ತಕ ವಿಮರ್ಶೆ ನಡೆಸಿಕೊಟ್ಟ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ತೃತಿಯ ಬಿಎ ವಿದ್ಯಾರ್ಥಿ ಚೇತನ್ ಆರ್ಯ, ದ್ವಿತೀಯ ಬಿಎ ವಿದ್ಯಾರ್ಥಿನಿ ವೈಷ್ಣವಿ ರಾಜೇಶ್, ಪ್ರಥಮ ಬಿಎ ವಿದ್ಯಾರ್ಥಿ ಶ್ರವಣ್ ಠಾಗೋರರ ಪುಸ್ತಕಗಳನ್ನು ವಿಮರ್ಶಿಸಿದರು.
ಕಾಲೇಜಿನ ಗ್ರಂಥಪಾಲಕಿ ಡಾ. ವನಜ, ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಪುಷ್ಪಲತಾ ಸೇರಿದಂತೆ ವಿಭಾಗದ ಇತರೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now