
ಬ್ರಹ್ಮಾವರ, ಏಪ್ರಿಲ್ 11, 2026:y
ಇಲ್ಲಿನ ಪ್ರತಿಷ್ಠಿತ ಎಸ್ಎಂಎಸ್ (SMS) ಕಾಲೇಜಿನ ನವೀಕೃತ ರೆವರೆಂಡ್ ಫಾದರ್ ಪಿ.ಜಿ. ಕೋಶಿ ಸ್ಮರಣಾರ್ಥ ಸಭಾಂಗಣ’ದ ಉದ್ಘಾಟನಾ ಸಮಾರಂಭವು ಶನಿವಾರ, ಏಪ್ರಿಲ್ 11 ರಂದು ಅತ್ಯಂತ ವೈಭವ ಹಾಗೂ ಶಿಸ್ತುಬದ್ಧವಾಗಿ ನೆರವೇರಿತು.
ಬೆಳಿಗ್ಗೆ 10:00 ಗಂಟೆಗೆ ಸಭಾಂಗಣದ ಪ್ರವೇಶ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ರಿಬ್ಬನ್ ಕತ್ತರಿಸುವ ಮೂಲಕ ನವೀಕೃತ ಕಟ್ಟಡವನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು. ಕುಮಾರಿ ಸೌಜನ್ಯ ಮತ್ತು ತಂಡದವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಕಾಲೇಜಿನ ಕಚೇರಿ ಅಧೀಕ್ಷಕರಾದ ಶ್ರೀಮತಿ ವಯಲೆಟಿನ್ ಲೂಯಿಸ್ ಸ್ವಾಗತಿಸಿ,
ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಜೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನವೀಕರಣದ ಆಶಯವನ್ನು ಹಂಚಿಕೊಂಡರು. ಬಳಿಕ ಗಣ್ಯರು ಜಂಟಿಯಾಗಿ ದೀಪ ಪ್ರಜ್ವಲಿಸಿ, ಸಂಸ್ಥೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ದಿ| ರೆವರೆಂಡ್ ಫಾದರ್ ಪಿ.ಜಿ. ಕೋಶಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಒಎಸ್ ಸಿ ಎಜುಕೇಶನಲ್ ಸೊಸೈಟಿಯ ಮಾಜಿ ಅಧ್ಯಕ್ಷರಾದ ವೆರಿ ರೆವರೆಂಡ್ ರಂಬನ್ ಜಿ. ಎಂ. ಸ್ಕರಿಯಾ ಅವರು ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಎಸ್ ಸಿ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ರೆವರೆಂಡ್ ಫಾದರ್ ಎಂ.ಸಿ. ಮಥಾಯಿ ಅವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು, ನವೀಕರಣ ಕಾರ್ಯದಲ್ಲಿ ಶ್ರಮಿಸಿದ ಮ್ಯಾನೇಜ್ಮೆಂಟ್ ಹಾಗೂ ಎಲ್ಲಾ ಹಿತೈಷಿಗಳ ಕಾರ್ಯವನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಉದ್ಘಾಟಕರನ್ನು ಹಾಗೂ ಅತಿಥಿಗಳನ್ನು ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜನರಲ್ ಸೆಕ್ರೆಟರಿ ಶ್ರೀ ಅಲೆನ್ ರೋಹನ್ ವಾಜ್, ಕಾಲೇಜು ವಿಭಾಗದ ಕಾರ್ಯದರ್ಶಿ ಶ್ರೀ ಆಲ್ವರಿಸ್ ಡಿಸಿಲ್ವಾ, ಮಾಜಿ ಖಜಾಂಚಿ ಶ್ರೀ ಮಿಲ್ಟನ್ ಒಲಿವೆರಾ, ಪಿಟಿಎ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ, ಹಳೆಯ ವಿದ್ಯಾರ್ಥಿ ಸಂಘದ ಖಜಾಂಚಿ ಶ್ರೀ ಜೋಸೆಫ್ ಸುವಾರಿಸ್ ಹಾಗೂ ಬ್ರಹ್ಮಾವರ ಎಸ್ಎಂಎಸ್ ಕೆಥೆಡ್ರಲ್ನ ಜನರಲ್ ಟ್ರೆಜರರ್ ಶ್ರೀ ಲ್ಯೂಕಾಸ್ ಡಯಾಸ್ ಉಪಸ್ಥಿತರಿದ್ದರು.
ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೆ. ನಾರಾಯಣನ್, ಶ್ರೀ ಗಣಪತಿ ಭಟ್, ನಿವೃತ್ತ ಸಿಬ್ಬಂದಿಗಳಾದ ಶ್ರೀಮತಿ ರೋಹಿಣಿ ಭಟ್ ಹಾಗೂ ಶ್ರೀ ಡೇನಿಯಲ್ ಮೊಂಥೇರೋ ಸೇರಿದಂತೆ ಸಂಸ್ಥೆಯ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಭರತ್ ರಾಜ್ ಎಸ್. ನೇಜಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪಿಟಿಎ ಶಿಕ್ಷಕ ಸಂಯೋಜಕರಾದ ಶ್ರೀಮತಿ ಸುಮಲತಾ ವಂದಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now