
ಉಡುಪಿ ಮಾರ್ಚ್ 23 : ಹನ್ನೊಂದನೇ ಶತಮಾನದ ಆದ್ಯ ವಚನಕಾರ, ನೇಕಾರ ಸಮುದಾಯದ ಆರಾಧ್ಯ ದೈವ ದೇವರ ದಾಸಿಮಯ್ಯ ಅವರು ಸರಳ ಭಾಷೆಯಲ್ಲಿ ಸರ್ವರೂ ಅರಿಯುವಂತೆ ವಚನಗಳನ್ನು ರಚಿಸುವ ಮೂಲಕ ಅಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಅವಿರತ ಶ್ರಮವಹಿಸಿದ್ದರು ಎಂದು ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದ
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಉಡುಪಿ ಇವರ ಸಹಯೋಗದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
12 ನೇ ಶತಮಾನದಲ್ಲಿ ಆರಂಭವಾದ ವಚನ ಚಳವಳಿಗಿಂತ ಮೊದಲೇ ಸರಳ ವಚನಗಳನ್ನು ರಚಿಸಿದ ಆದ್ಯ ವಚನಕಾರ ಎಂಬ ಹೆಗ್ಗಳಿಕೆಗೆ ದಾಸಿಮಯ್ಯ ಪಾತ್ರರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಮೂಲವಾಗಿರುವ ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಂಡಿದೆ. ಇದಕ್ಕೆ ದೇವರ ದಾಸಿಮಯ್ಯ ಕಾರಣಕರ್ತರು ಎಂದರು.
ಜಾತಿ, ಲಿಂಗ–ತಾರತಮ್ಯ, ಸ್ತ್ರೀ ಶೋಷಣೆ ವಿರೋಧಿಸಿದ್ದ ದಾಸಿಮಯ್ಯ ಸಮಾಜ ಸುಧಾರಕರು ಆಗಿದ್ದರು. ಶರಣರ ವಚನಗಳನ್ನು ಸರ್ವರೂ ಓದಿಕೊಂಡರೆ ನೈತಿಕತೆ ಬೆಳೆಯಲಿದೆ. ಇಂತಹ ಮಹನೀಯರುಗಳ ಆದರ್ಶಗಳು ಯುವಪೀಳಿಗೆಗೆ ಪ್ರೇರಣೆಯಾಗಲಿದ್ದು, ಮಾನವರಲ್ಲಿರುವ ದ್ವೇಷ, ಅಸೂಯೆ ಭಾವನೆಗಳನ್ನು ಹೋಗಲಾಡಿಸಲು ಇಂತಹ ದಾರ್ಶನಿಕರ ಸಂದೇಶಗಳು ದಾರಿದೀಪವಾಗಲಿವೆ ಎಂದರು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now