ಶಿಕ್ಷಣದೊಂದಿಗೆ ಬದುಕಿನ ಮೌಲ್ಯಗಳನ್ನು ಕಲಿತುಕೊಳ್ಳಿ ಉಪನ್ಯಾಸಕಿ ರತ್ನಮಾಲ ವಿದ್ಯಾರ್ಥಿಗಳಿಗೆ ಕರೆ

ಶಿಕ್ಷಣದೊಂದಿಗೆ ಬದುಕಿನ ಮೌಲ್ಯಗಳನ್ನು ಕಲಿತುಕೊಳ್ಳಿ ಉಪನ್ಯಾಸಕಿ ರತ್ನಮಾಲ ವಿದ್ಯಾರ್ಥಿಗಳಿಗೆ ಕರೆ

0Shares

ಉದ್ಯಾವರ : ಶಿಕ್ಷಣ ಎಂಬುದು ಒಂದು ಕಾಲದಲ್ಲಿ ಸಮಾಜದ ಕೆಳಸ್ತರದ ಮಂದಿಗೆ ಗಗನ ಕುಸುಮವಾಗಿತ್ತು. ಆದರೆ ಈಗ ಹಾಗಲ್ಲ ಕಡ್ಡಾಯ ಶಿಕ್ಷಣದ ವ್ಯವಸ್ಥೆಯ ಅಡಿಯಲ್ಲಿ ನಾವಿದ್ದೇವೆ. ಹಾಗಾಗಿ ಶಿಕ್ಷಣವು ಇಂದು ಎಲ್ಲರ ಬದುಕಿನಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಮಕ್ಕಳು ಶಾಲೆ ಕಾಲೇಜುಗಳ ಶಿಕ್ಷಣವನ್ನು ಕಲಿಯುವುದರೊಂದಿಗೆ ಬದುಕು ಎದುರಿಸುವ ಸವಾಲುಗಳನ್ನು ಅರಿಯ ಬೇಕಾಗಿದೆ. ಬದುಕಿನ ಮೌಲ್ಯಗಳನ್ನು ಕಲಿಯಬೇಕಾಗಿದೆ. ತಾವು ಕಲಿತ ಶಿಕ್ಷಣಕ್ಕೆ ಬೆಲೆ ಬರಬೇಕಾದರೆ ನಾವು ಬದುಕಿನ ಮೌಲ್ಯಗಳನ್ನು ಕೂಡ ಅದರೊಂದಿಗೆ ಅಳವಡಿಸಿಕೊಳ್ಳಬೇಕಾಗಿದೆ. ಈಗ ಶಿಕ್ಷಣವನ್ನು ಕಲಿಯುವ ಮನಸ್ಸಿದ್ದರೆ ಸಾಕು ಈಗಿನ ಸಂದರ್ಭದಲ್ಲಿ ಅದನ್ನು ಪ್ರೋತ್ಸಾಹಿಸುವ ವಾತಾವರಣ ನಮ್ಮ ಮುಂದಿದೆ ಅದನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕು.

ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನ ಮುಖ್ಯವಾದದು. ಪುಸ್ತಕದಲ್ಲಿ ಪಡೆದ ಅರಿವು ಮಸ್ತಕದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುತ್ತದೆ. ಈ ನಿಟ್ಟಿನಲ್ಲಿ ಈ ಸಂಸ್ಥೆ ಪಠ್ಯಪುಸ್ತಕವನ್ನು ನೀಡುವುದರ ಮೂಲಕ ನಿಮ್ಮ ಮುಂದಿನ ಶಿಕ್ಷಣಕ್ಕೆ ನೆರವಾಗುತ್ತಿರುವುದು ಒಂದು ಮಹತ್ತರವಾದ ಸಂಗತಿ. ಪುಸ್ತಕವನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಿ ಅದು ನಿಮಗೆ ಶಿಕ್ಷಣಕ್ಕೆ ಸಂಬಂಧಪಟ್ಟ ಪುಸ್ತಕವಾಗಲಿ ಅಥವಾ ಸಾಮಾನ್ಯ ಜ್ಞಾನದ ಪುಸ್ತಕಗಳಾಗಲಿ ಅದು ನಿಮ್ಮ ಬದುಕನ್ನು ರೂಪಿಸುತ್ತದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರತ್ನಮಾಲ ಅವರು ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶಯದಲ್ಲಿ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಜರಗಿದ ಯು . ಎಫ್ . ಸಿ ಪುಸ್ತಕ ಭಂಡಾರದಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿ ಮಾತನಾಡಿದರು.

ಅವರು ಮುಂದುವರಿಯುತ್ತಾ ಕೊರೋನೋತ್ತರ ಕಾಲದ ವಿದ್ಯಾರ್ಥಿಗಳು ಮೊಬೈಲಿಗೆ ಅತಿಯಾಗಿ ಅಂಟಿಕೊಂಡಿದ್ದಾರೆ. ಕೊರೋನ ಕಾಲದಲ್ಲಿ ಶಿಕ್ಷಣಕ್ಕೆ ಮೊಬೈಲ್ ಅನಿವಾರ್ಯವಾಗಿತ್ತು. ಹಾಗಾಗಿ ಅದನ್ನು ನಾವು ಬಳಸುತ್ತಿದ್ದೆವು. ಈಗ ಕೂಡ ಅದು ಅತಿಯಾಗಿ ಮುಂದುವರಿಯುತ್ತಿದೆ. ಇದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾರಕ ಬೆಳವಣಿಗೆ. ಹಾಗಾಗಿ ಮೊಬೈಲ್ ಅಗತ್ಯ ಬಿದ್ದಾಗ ಮಾತ್ರ ಬಳಸಿಕೊಳ್ಳಿ ಇಲ್ಲವಾದರೆ ಅದರಿಂದ ದೂರವಾಗಿ. ಶಿಕ್ಷಣವನ್ನು ಕಲಿಯಿರಿ. ಅದರೊಂದಿಗೆ ವಿನಯವಂತಿಕೆ ಬೆಳೆಯಲಿ. ಅಹಂ ಅನ್ನು ಬೆಳೆಸಿಕೊಳ್ಳಬೇಡಿ. ಅದು ನಿಮ್ಮ ಭವಿಷ್ಯಕ್ಕೆ ಮಾರಕವಾಗುತ್ತದೆ ಎಂದರು .

ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಗೌರವಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ರವರು ಮಾತನಾಡುತ್ತಾ ವರ್ಷದಿಂದ ವರ್ಷಕ್ಕೆ ಒಂದು ಸಮಾಜ ಸೂಕ್ಷ್ಮತೆಯನ್ನು ಹೇಗೆ ಕಳೆದುಕೊಳ್ಳುತ್ತದೆ ಅನ್ನೋದಕ್ಕೆ ಯು. ಎಫ್. ಸಿ ಬುಕ್ ಬ್ಯಾಂಕಿನ ಈ ಪುಸ್ತಕ ವಿತರಣಾ ಕಾರ್ಯಕ್ರಮ ಒಂದು ಉದಾಹರಣೆ, ನಮ್ಮ ಸಂಸ್ಥೆ ಬುಕ್ ಬ್ಯಾಂಕ್ ಸ್ಥಾಪಿಸಿ 20ಕ್ಕೂ ಹೆಚ್ಚು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ನೀಡುತ್ತಾ ಬಂದಿರುತ್ತದೆ. ಬುಕ್ ಬ್ಯಾಂಕಿನ ನಿಯಮದ ಅನುಸಾರ ತಮ್ಮ ಎಕಾಡೆಮಿಕ್ ವರ್ಷ ಮುಕ್ತಾಯವಾದ ನಂತರ ಈ ಪುಸ್ತಕವನ್ನು ಬುಕ್ ಬ್ಯಾಂಕಿಗೆ ಹಿಂತಿರುಗಿಸ ಬೇಕು. ಆದರೆ ವರ್ಷದಿಂದ ವರ್ಷಕ್ಕೆ ಪುಸ್ತಕವನ್ನು ಹಿಂತಿರುಗಿಸದಿರುವ ವಿದ್ಯಾರ್ಥಿಗಳ ಸಂಖ್ಯೆ ಬೆಳೆಯುತ್ತಿದೆ ಎಂದರೆ ವರ್ಷದಿಂದ ವರ್ಷಕ್ಕೆ ನಾವು ಅಪ್ರಾಮಾಣಿಕರಾಗುತ್ತಿದ್ದೇವೆ ಎಂಬುದನ್ನು ಇದು ಸೂಚಿಸುತ್ತದೆ. ವಿದ್ಯಾರ್ಥಿಗಳೇ ನೀವು ಇಂದು ಪಡೆದ ಪುಸ್ತಕವನ್ನು ಮುಂದಿನ ವರ್ಷ ಬೇರೆ ವಿದ್ಯಾರ್ಥಿಗಳು ನಿರೀಕ್ಷಿಸುತ್ತಿದ್ದಾರೆ. ಹಾಗಾಗಿ ದಯಮಾಡಿ ಸಕಾಲದಲ್ಲಿ ಅದನ್ನ ಸಂಸ್ಥೆಗೆ ಹಿಂತಿರುಗಿಸಿ ಮುಂದಿನ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಮತ್ತು ನೀವು ಆರ್ಥಿಕರಾಗಿ ಸಭಲರಾದಾಗ ಇಂಥ ಯೋಜನೆಗಳಿಗೆ ಪ್ರೋತ್ಸಾಹವನ್ನು ನೀಡಿ ಎಂದರು .

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಶರತ್ ಕುಮಾರ್ ರವರು ಉಪಸ್ಥಿತರಿದ್ದರು .

ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿಯವರು ಅತಿಥಿಗಳನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ, ಸುಹೇಲ್ ರಹಮತ್ತುಲ್ಲ ಧನ್ಯವಾದವಿತ್ತರು. ಮಾಜಿ ಅಧ್ಯಕ್ಷರಾದ ತಿಲಕ್ ರಾಜ್ ಸಾಲ್ಯಾನ್ ರವರು ಫಲಾನುಭವಿಗಳ ಹೆಸರನ್ನು ವಾಚಿಸಿದರು. ಮಾಜಿ ಅಧ್ಯಕ್ಷ ಅನುಪ್ ಕುಮಾರ್ ರವರು ಕಾರ್ಯಕ್ರಮ ನಿರ್ವಹಿಸಿದರು .

ಸುಮಾರು 150 ಮಂದಿ ವಿದ್ಯಾರ್ಥಿಗಳು ಈ ಬುಕ್ ಬ್ಯಾಂಕಿನ ಫಲಾನುಭವಿಗಳಾದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now