ಉಪ ಲೋಕಾಯುಕ್ತರ ದಿಢೀರ್ ಭೇಟಿ : 17 ಸ್ವಯಂ ಪ್ರೇರಿತ ಪ್ರಕರಣಗಳ ದಾಖಲು

ಉಪ ಲೋಕಾಯುಕ್ತರ ದಿಢೀರ್ ಭೇಟಿ : 17 ಸ್ವಯಂ ಪ್ರೇರಿತ ಪ್ರಕರಣಗಳ ದಾಖಲು

0Shares

ಉಡುಪಿ ಏಪ್ರಿಲ್ 08 : ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಅವರು ಫೆಬ್ರವರಿ 26 ಮತ್ತು 27 ರಂದು ಜಿಲ್ಲೆಗೆ ಸಂಬಂಧಿಸಿದಂತೆ ಬಾಕಿ ಇರುವ ದೂರು ಪ್ರಕರಣಗಳನ್ನು ಇತ್ಯರ್ಥಪಡಿಸುವ ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಶಿಬಿರವನ್ನು ಹಮ್ಮಿಕೊಂಡ ಅವಧಿಯಲ್ಲಿ ಜಿಲ್ಲೆಯ ವಿವಿಧ ಇಲಾಖೆ ಹಾಗೂ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆ, ವಿವಿಧ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ 17 ಪ್ರಕರಣಗಳನ್ನು ದಾಖಲಿಸಿಕೊಂಡಿರುತ್ತಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಕರ್ತವ್ಯದ ಅವಧಿಯಲ್ಲಿ ಅನುಮತಿ ಪಡೆಯದೇ ಪತ್ರಾಂಕಿತ ಸಹಾಯಕರು ತೆರಳಿರುವ ಬಗ್ಗೆ, ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಮಾಹಿತಿಯನ್ನಾಗಲೀ ಅಥವಾ ದಾಖಲಾತಿಗಳನ್ನಾಗಲೀ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ವಿಫಲರಾಗಿರುವ ಬಗ್ಗೆ, ಕಛೇರಿಯ ಕೆಲವು ಸಿಬ್ಬಂದಿಗಳು ಗುರುತಿನ ಚೀಟಿ ಧರಿಸದಿರುವ ಬಗ್ಗೆ, ಹಾಜರಾತಿ ವಹಿ, ನಗದು ಘೋಷಣೆ ವಹಿ ಮತ್ತು ಚಲನವಲನ ವಹಿಯನ್ನು ಸರ್ಕಾರದ ಮಾರ್ಗಸೂಚಿಯನ್ವಯ ನಿರ್ವಹಿಸದೇ ಇರುವುದು ಸೇರಿದಂತೆ ಹಲವು ಅಂಶಗಳಲ್ಲಿ ನ್ಯೂನ್ಯತೆ ಕಂಡು ಬಂದ ಹಿನ್ನೆಲೆ, ಇಲಾಖೆಯ ಕೆಲವು ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ, ಇಲಾಖಾ ವತಿಯಿಂದ ಕಳೆದ ಎರಡು ವರ್ಷಗಳಲ್ಲಿ ಹಮ್ಮಿಕೊಳ್ಳಲಾಗಿರುವ ಯೋಜನೆಗಳ ಕುರಿತು ಹಾಗೂ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ಕೇಳಿದ ಹಲವು ಪ್ರಶ್ನೆಗೆ ಸರಿಯಾದ ಮಾಹಿತಿಯನ್ನು ನೀಡಿರುವುದಿಲ್ಲ ಈ ಹಿನ್ನೆಲೆ, ಇಲಾಖೆಯ ಕೆಲವು ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ, ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಇರುವ ಹಾಸ್ಟೆಲ್ಗಳ ಸ್ವಚ್ಛತೆಯ ಸ್ಥಿತಿಗತಿಗಳ ಬಗ್ಗೆ, ಹಾಸ್ಟೆಲ್ನ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರ, ಶುದ್ಧ ಕುಡಿಯುವ ನೀರಿನ ಸೌಲಭ್ಯಗಳ ಬಗ್ಗೆ, ವಿದ್ಯಾರ್ಥಿಗಳಿಗೆ ನೀಡುವ ಉಚಿತ ಆರೋಗ್ಯ ತಪಾಸಣೆಯ ವಿವರ, ಸೇರಿದಂತೆ ಇತರೆ ಪ್ರಶ್ನೆಗಳಿಗೆ ಸಮರ್ಪಕ ಮಾಹಿತಿ ಹಾಗೂ ದಾಖಲೆಗಳನ್ನು ನೀಡದಿರುವ ಹಿನ್ನೆಲೆ, ಇಲಾಖೆಯ ವಿವಿಧ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಲಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ, ಕಚೇರಿಗೆ ಭೇಟಿ ನೀಡಿದ ವೇಳೆ, ಕಛೇರಿಯ ಅಧಿಕಾರಿಗಳಿಗೆ ಜಿಲ್ಲೆಯಲ್ಲಿರುವ ಕ್ವಾರಿಗಳ ಸಂಖ್ಯೆ, ಪರವಾನಗಿ ಪಡೆದಿರುವ ಕ್ರಷರ್ಗಳ ಸಂಖ್ಯೆ, ಸ್ಥಳ ಪರಿಶೀಲನೆ ನಡೆಸಿ ಈವರೆಗೆ ಪರವಾನಗಿ ಉಲ್ಲಂಘನೆ ಬಾಬ್ತು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಬಗ್ಗೆ, ಕ್ರಷರ್ಗಳು ಸರ್ಕಾರಿ ಭೂಮಿ/ಪಟ್ಟಾ ಭೂಮಿಯಲ್ಲಿವೆಯೇ, ಇವುಗಳಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ, ಕಳೆದ 02 ವರ್ಷಗಳಿಂದ ಕಾರ್ಯ ನಿರ್ವಹಿಸದಿರುವ ಕ್ವಾರಿಗಳ ಬಗ್ಗೆ, ಗಣಿ ಮತ್ತು ಕ್ರಷರ್ಗಳಲ್ಲಿ ಕೆಲಸ ಮಾಡುವ ಕಾರ್ಮಿಕರುಗಳಿಗೆ ವಿಮೆ ಮಾಡಿಸಿರುವ ಬಗ್ಗೆ, ಗಣಿಗಾರಿಕೆ ಪ್ರದೇಶ ವ್ಯಾಪ್ತಿಯಲ್ಲಿ ಜಿಪಿಎಸ್ ನಿರ್ದೇಶಾಂಕಗಳು ಇರುವ ಬಗ್ಗೆ ಸೇರಿದಂತೆ ಲೋಕಾಯುಕ್ತರ ಹಲವು ಪ್ರಶ್ನೆಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿರುವುದಿಲ್ಲ. ಕರ್ತವ್ಯ ಲೋಪ ಕಂಡುಬಂದ ಹಿನ್ನೆಲೆ, ಇಲಾಖೆಯ ಕೆಲವು ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಲಾಗಿದೆ.

ಉಡುಪಿ ತಾಲೂಕಿನ ತೆಂಕನಿಡಿಯೂರು ಪೊಟ್ಟು ಕೆರೆಯನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪಂಚಾಯತಿಯಿಂದಾಗಲೀ ಅಥವಾ ನಗರಸಭೆಯಿಂದಾಗಲೀ ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದ್ದು, ನಗರಸಭೆಯ ವಿವಿಧ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲಾಗಿರುತ್ತದೆ. 

ಮಣಿಪಾಲ ಪೊಲೀಸ್ ಠಾಣೆಗೆ ಸಂಬಂಧಿಸಿದಂತೆ, ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಪೆಡ್ಲರ್ಗಳ ವಿರುದ್ಧ ಹಾಗೂ ಗಾಂಜಾ ತಯಾರು ಮಾಡುವವರ ವಿರುದ್ಧವೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ದೊರಕದ ಹಿನ್ನೆಲೆ, ಠಾಣೆಯ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲಾಗಿರುತ್ತದೆ.

ನಿಟ್ಟೂರಿನ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು ಭೇಟಿ ನೀಡಿದ ಸಂದರ್ಭದಲ್ಲಿ, ಉಡುಪಿ ನಗರದ ತ್ಯಾಜ್ಯ ನೀರು ಸಮರ್ಪಕವಾಗಿ ಸಂಸ್ಕರಣೆ ಆಗದೇ ಇರುವ ಬಗ್ಗೆ, ಸದರಿ ಘಟಕದಲ್ಲಿನ ನೀರಿನಲ್ಲಿ ಪಾಚಿ ಸಂಗ್ರಹವಾಗಿರುವುದು ಕಂಡುಬಂದಿರುವ ಬಗ್ಗೆ, ಸದರಿ ಘಟಕದ ತ್ಯಾಜ್ಯ ನೀರು ಮತ್ತು ನಗರದ ಇತರೆ ಸಂಸ್ಕರಿಸದ ಕೊಳಚೆ ನೀರು ಚರಂಡಿಗಳ ಮೂಲಕ ಹಾಗೂ ನದಿಗಳ ಮೂಲಕ ಹರಿದು ಸಮುದ್ರವನ್ನು ಸೇರಿ ಕಲುಷಿತಗೊಳಿಸುತ್ತಿದ್ದರೂ ಸಹ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಹಾಗೂ ನೀರಾವರಿ ಇಲಾಖೆಯವರು ನಗರಸಭೆಯವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಳ್ಳದೇ ಕರ್ತವ್ಯಲೋಪ ಎಸಗಿರುವ ಬಗ್ಗೆ, ಕಲ್ಮಾಡಿ ಬ್ರಿಡ್ಜ್ನಲ್ಲಿ ಹರಿಯುವ ಕಲುಷಿತ ನೀರಿನಿಂದ ಸೊಳ್ಳೆಗಳು, ನೊಣಗಳು ಹಾಗೂ ಇತರೆ ವಿಷಜಂತುಗಳು ಹೆಚ್ಚಿದ್ದು, ಇವುಗಳಿಂದ ಸ್ಥಳೀಯ ಜನರು ತೊಂದರೆ ಅನುಭವಿಸುತ್ತಿರುವ ಬಗ್ಗೆ, ಮಲ್ಪೆ ಸೀವಾಕ್ ಪ್ರದೇಶ ಹಾಗೂ ಬಂದರಿನ ಸುತ್ತಮುತ್ತ ಪ್ರದೇಶದಲ್ಲಿ ಪ್ಲಾಸ್ಟಿಕ್ ಕವರ್, ಬಾಟಲ್ಗಳನ್ನು ಎಲ್ಲೆಂದರಲ್ಲಿ ಕಸವನ್ನು ಬಿಸಾಡಿದ್ದು, ಸ್ವಚ್ಚತೆಯಿಂದ ಕೂಡಿರುವುದಿಲ್ಲ. ಈ ಬಗ್ಗೆ ಕ್ರಮವಹಿಸದಿರುವುದು ಸೇರಿದಂತೆ ಭೇಟಿ ಸಂದರ್ಭದಲ್ಲಿ ನ್ಯೂನ್ಯತೆಗಳು ಕಂಡು ಬಂದ ಹಿನ್ನೆಲೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿರುತ್ತದೆ. 

ಮೀನುಗಾರಿಕೆ ಇಲಾಖೆಯ ಅಪರ ನಿರ್ದೇಶಕರು, ಉಪ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರ ಕಚೇರಿಗೆ ಸಂಬಂಧಿಸಿದಂತೆ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ನೀಡಿರುವುದಿಲ್ಲ. ಆದ್ದರಿಂದ  ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿರುತ್ತದೆ.  

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಸಂಬಂಧಿಸಿದಂತೆ, ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಎಷ್ಟು ಸ್ಟೇಜ್ ಕ್ಯಾರಿರ್ಸ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ಸ್ ವಾಹನಗಳಿವೆ? ಎಲ್ಲಾ ಸ್ಟೇಜ್ ಕ್ಯಾರಿರ್ಸ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ಸ್ ವಾಹನಗಳಿಗೂ ಜಿ.ಪಿ.ಎಸ್., ಅಳವಡಿಸಲಾಗಿದೆಯೇ? , ಕಳೆದ ಎರಡು ವರ್ಷಗಳಲ್ಲಿ ಎಷ್ಟು ವಾಹನಗಳು ಕಾನೂನನ್ನು ಉಲ್ಲಂಘನೆ ಮಾಡಿರುತ್ತವೆ?, ಕಾನೂನು ಉಲ್ಲಂಘನೆ ಮಾಡಿದ ಎಷ್ಟು ವಾಹನಗಳನ್ನು ಸೀe಼ï ಮಾಡಿರುತ್ತೀರಿ? ಎಂಬ ಲೋಕಾಯುಕ್ತರ ಪ್ರಶ್ನೆಗೆ ಸರಿಯಾದ ಉತ್ತರವನ್ನು ಸೂಕ್ತ ದಾಖಲಾತಿಗಳೊಂದಿಗೆ ಸಲ್ಲಿಸಲು ಸಾರಿಗೆ ಅಧಿಕಾರಿಗಳು ವಿಫಲರಾಗಿರುತ್ತಾರೆ. ಖನಿಜಗಳನ್ನು ಸಾಗಿಸುವ ವಾಹನಗಳ ಕಣ್ಗಾವಲಿನ ಬಗ್ಗೆ ಚೆಕ್ಪೋಸ್ಟ್ಗಳಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ಕ್ರಮದ ಬಗ್ಗೆ, ಶಾಲಾವಾಹನಗಳು ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಕುರಿತು, ಚಾಲನಾ ಪರವಾನಗಿ, ಕಲಿಕೆಯ ಪರವಾನಗಿಯನ್ನು ಸಾರ್ವಜನಿಕರಿಗೆ ವಿತರಿಸಿರುವ ಬಗ್ಗೆ ರಿಜಿಸ್ಟರ್ನ್ನು ಸರಿಯಾಗಿ ನಿರ್ವಹಿಸದೇ ಕರ್ತವ್ಯಲೋಪವೆಸಗಿರುವುದು ಭೇಟಿ ವೇಳೆ ಕಂಡುಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿರುತ್ತದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಇಲಾಖೆಯ ಅಧಿಕಾರಿಗಳು ಯಾವುದೇ ಮಾಹಿತಿಯನ್ನಾಗಲೀ ಅಥವಾ ದಾಖಲಾತಿಗಳನ್ನಾಗಲೀ ನೀಡದೇ ಇರುವ ಹಿನ್ನೆಲೆ, ಅವರುಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿರುತ್ತದೆ.

ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ, ಜಿಲ್ಲೆಯಾದ್ಯಂತ ಎಷ್ಟು ರೆಸಾರ್ಟ್ಗಳು, ಲಾಡ್ಜ್ಗಳು ಹಾಗೂ ಹೋಮ್-ಸ್ಟೇಗಳು ತ್ಯಾಜ್ಯವನ್ನು ಕೆರೆಗಳಿಗೆ, ನದಿಗಳಿಗೆ ಹಾಗೂ ಸಮುದ್ರಕ್ಕೆ ಬಿಡುತ್ತಾ ಪರಿಸರವನ್ನು ಹಾನಿ ಮಾಡುತ್ತಿದ್ದಾರೆ ಎಂಬುದರ ಬಗ್ಗೆ, ಜಿಲ್ಲೆಯಾದ್ಯಂತ ಎಷ್ಟು ರೆಸಾರ್ಟ್ಗಳು ಹಾಗೂ ಹೋಮ್-ಸ್ಟೇಗಳು ಬಪ಼ರ್ ವಲಯ ವ್ಯಾಪ್ತಿಯನ್ನು ಮೀರಿರುತ್ತಾರೆ ಎಂಬುದರ ಬಗ್ಗೆ ಸೇರಿದಂತೆ ಮತ್ತಿತರ ಪ್ರಶ್ನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಯಾವುದೇ ಅಧಿಕಾರಿಗಳು ನೀಡಿರುವುದಿಲ್ಲ. ಈ ಬಗ್ಗೆ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆ, ಅವರುಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿರುತ್ತದೆ.

ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟಂತೆ ಉಪ ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿದ ವೇಳೆ ಕಚೇರಿಯಲ್ಲಿ ಕಡತಗಳು ಬಾಕಿ ಉಳಿಸಿಕೊಂಡು, ವರ್ಷಗಳೇ ಕಳೆದರೂ ಕಡತಗಳನ್ನು ವಿಲೇವಾರಿ ಮಾಡಿರುವುದಿಲ್ಲ ಎಂದು ಸಾರ್ವಜನಿಕರು ಆಪಾದಿಸಿರುವ ಬಗ್ಗೆ, ವಸತಿ ಉದ್ದೇಶದ ಅರ್ಜಿ ಬಾಕಿ ಇರುವ ಬಗ್ಗೆ, ವಿನ್ಯಾಸ ಅನುಮೋದನೆಯ ಅರ್ಜಿಗಳನ್ನು ಬಾಕಿ ಇರಿಸಿಕೊಂಡಿರುವ ಬಗ್ಗೆ, ಕಚೇರಿಯ ಕಡತ ಹಾಗೂ ವಹಿಗಳನ್ನು ಸರಿಯಾಗಿ ನಿರ್ವಹಿಸದೇ ಇರುವ ಬಗ್ಗೆ, ಇ-ಕಚೇರಿಯನ್ನು ಅಳವಡಿಸಿಕೊಂಡಿಲ್ಲದೇ ಇರುವುದು ಸೇರಿದಂತೆ ಹಲಯ ನ್ಯೂನ್ಯತೆಗಳು ಕಂಡು ಬಂದ ಹಿನ್ನೆಲೆ, ಸಂಬಂಧಪಟ್ಟವರ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲಾಗಿರುತ್ತದೆ. 

ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ 11-ಇ, ತತ್ಕಾಲ್ ಪೋಡಿ ಸೇರಿದಂತೆ ಹಲವು ಕಡತಗಳ ಬಾಕಿ, ಕಳೆದ 7 ವರ್ಷಗಳಿಂದ ನಿವೃತ್ತ ಸೈನಿಕನ ಜಮೀನಿನ ಅಳತೆ ಮಾಡದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಮಾಡಿಕೊಡಬೇಕು ಎಂದು ತಿಳಿಸಿ, ನ್ಯೂನ್ಯತೆಗಳು ಕಂಡು ಬಂದ ಹಿನ್ನೆಲೆ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿರುತ್ತದೆ.

ಉಡುಪಿ ನಗರಸಭೆ ಕಛೇರಿಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ, ಕಳೆದ ಮೂರು ವರ್ಷಗಳಲ್ಲಿ ಕೈಗೊಂಡ ಕಾಮಗಾರಿಗಳ ವಿವರ, ವಾಹನಗಳ ನಿರ್ವಹಣೆ, ಆಸ್ತಿ ತೆರಿಗೆ ಸಂಗ್ರಹ, ಇ-ಆಸ್ತಿ ಮಾಡುವ ಬಾಕಿ ಇರುವ ಅರ್ಜಿಗಳ ವಿವರ, ಉದ್ದಿಮೆ ಪರವಾನಿಗೆ, ಅನುಮೋದಿತ ನಕ್ಷೆಗೆ ವ್ಯತಿರಿಕ್ತವಾಗಿ ಅಕ್ರಮ ಕಟ್ಟಡ ನಿರ್ಮಾಣ ಸೇರಿದಂತೆ ಮತ್ತಿತರ ವಿವರಗಳನ್ನು ಉಪ ಲೋಕಾಯುಕ್ತ ನ್ಯಾಯಮೂರ್ತಿ ಹಾಗೂ ತಂಡದವರು ಪರಿಶೀಲಿಸಿ, ನ್ಯೂನ್ಯತೆಗಳು ಕಂಡು ಬಂದ ಹಿನ್ನೆಲೆ, ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸಿಸಲಾಯಿತು.

ಜಿಲ್ಲಾ ಸಾರ್ವಜನಿಕ ಆಸ್ಪತ್ರ್ಲೆಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಜನನ ಹಾಗೂ ಮರಣ ಪ್ರಮಾಣದ ಅನೇಕ ಪತ್ರಗಳು ಕಂಡು ಬಂದ ಹಿನ್ನೆಲೆ, ಸಂಬಂಧಪಟ್ಟವರಿಗೆ ಪೋಸ್ಟ್ ಮೂಲಕ ರವಾನೆ ಮಾಡಬೇಕೆಂದು ಸೂಚನೆ ನೀಡಿದ ಅವರು, ಔಷಧಿ ವಿತರಣಾ ಕೇಂದ್ರ, ನೋಂದಣಿ ಕೇಂದ್ರ, ಆಸ್ಪತ್ರೆಯ ಕೆಲವು ವೈದ್ಯರು ಹಾಗೂ ಸಿಬ್ಬಂದಿಗಳು ಸಮವಸ್ತ್ರ ಧರಿಸದೇ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ, ಆಸ್ಪತ್ರೆಯ ನಿರುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡದೇ ಇರುವ ಬಗ್ಗೆ, ಆಸ್ಪತ್ರೆಯ ಒಳಭಾಗ ಹಾಗೂ ಆವರಣದಲ್ಲಿ ಸ್ವಚ್ಛತೆ ಕಾಪಾಡದೇ ಇರುವ ಬಗ್ಗೆ, ಸೈನ್ ಬೋರ್ಡ್ ಅಳವಡಿಸದೇ ಇರುವ ಬಗ್ಗೆ, ಶುಲ್ಕದ ಚಾರ್ಟ್ ಅನ್ನು ನಿರ್ವಹಿಸದೇ ಇರುವ ಬಗ್ಗೆ, ಆಸ್ಪತ್ರೆಯ ಕ್ಯಾಂಟೀನ್ ಅನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಸೇರಿದಂತೆ ಮತ್ತಿತರ ಬಗ್ಗೆ ಪರಿಶೀಲನೆ ನಡೆಸಿದ ಅವರು, ನ್ಯೂನ್ಯತೆಗಳು ಕಂಡು ಬಂದ ಹಿನ್ನೆಲೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲಾಯಿತು. 

 ಉಪ ನೋಂದಣಾಧಿಕಾರಿಗಳ ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರ ದೂರುಗಳ ಕಡತವನ್ನು ನಿರ್ವಹಿಸದೇ ಇರುವ ಬಗ್ಗೆ, ಅಲ್ಲಿನ ಗುತ್ತಿಗೆ ನೌಕರರು ತಮ್ಮ ಸ್ವಂತ ಬ್ಯಾಗ್ನಲ್ಲಿ ಅನೇಕ ಖಾಸಗಿ ದಾಖಲೆಗಳು ಕಂಡು ಬಂದ ಹಿನ್ನೆಲೆ, ಸೇರಿದಂತೆ ಮತ್ತಿತರ ನ್ಯೂನ್ಯತೆಗಳು ಕಂಡು ಬಂದಿರುವುದರಿಂದ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲಾಗಿರುತ್ತದೆ. 

ಉಡುಪಿಯ ತಹಶೀಲ್ದಾರ್ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಆರ್.ಆರ್.ಟಿ. ಕಡತಗಳು, ತತ್ಕಾಲ್ ಪೋಡಿ ಕಡತಗಳು, ನಮೂನೆ 57, ಇ-ಪೌತಿ ಖಾತೆಗಳ ಕಡತಗಳು ವಿಲೇವಾರಿಗೆ ಬಾಕಿ ಇರುವ ಬಗ್ಗೆ, ಸರ್ಕಾರಿ ಕಛೇರಿಯಲ್ಲಿ ಅನಧೀಕೃತವಾಗಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿರುವುದು ಹಾಗೂ ತಮ್ಮ ಮೇಲಾಧಿಕಾರಿಗಳಿಂದ ಚಿಟ್ ಫಂಡ್ ಕಾಯ್ದೆಯಡಿಯಲ್ಲಿ ಯಾವುದೇ ಅನುಮತಿಯನ್ನು ಪಡೆಯದೇ ಇರುವುದು ಸೇರಿದಂತೆ ಮತ್ತಿತರ ಕರ್ತವ್ಯಲೋಪವಾಗಿರುವ ಹಿನ್ನೆಲೆ ಸಂಬಂಧಪಟ್ಟವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿರುತ್ತದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now