
ಉಡುಪಿ, : ಭಗವದ್ಗೀತೆಯ ತತ್ವಗಳಲ್ಲಿ ಜೀವನ ಸಾರ ಅಡಗಿದ್ದು, ಶ್ರೀ ಕೃಷ್ಣನು ಭಗವದ್ಗೀತೆಯ ಮೂಲಕ ನೀಡಿದ ಸಂದೇಶವು ಮಾನವ ಕುಲಕ್ಕೆ ಅಂದು ಇಂದು ಎಂದೆಂದಿಗೂ ಪ್ರಸ್ತುತವಾಗಿದೆ ಎಂದು ಉಡುಪಿ ನಗರಾಭಿವೃಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹೇಳಿದರು.
ಅವರು ಇಂದು ನಗರದ ಎಂ.ಜಿ.ಎಂ ಕಾಲೇಜಿನ ಟಿ. ಮೋಹನದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್ನ ಸೆಮಿನಾರ್ ಹಾಲ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀಕೃಷ್ಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
ಶ್ರೀ ಕೃಷ್ಣ ಪರಮಾತ್ಮನು ಬಾಲ್ಯದಿಂದಲೂ ದುಷ್ಟ ಶಕ್ತಿಗಳನ್ನು ನಿಗ್ರಹಿಸಿಕೊಂಡು ಬಂದಿದ್ದು, ಅವರ ಜೀವನ ಚರಿತ್ರೆಯು ಎಲ್ಲರಿಗೂ ಮಾದರಿ ಹಾಗೂ ಸ್ಪೂರ್ತಿ ನೀಡುತ್ತದೆ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಲು ಅವತಾರವೆತ್ತಿದ ಶ್ರೀ ಕೃಷ್ಣರು ಮಹಾಭಾರತದಂತಹ ವಿಸ್ತಾರವಾದ ಮಹಾಕಾವ್ಯದಲ್ಲಿ ಸರ್ವವ್ಯಾಪಿಯಾಗಿದ್ದಾರೆ ಎಂದರು.
ಪೂರ್ಣ ಪ್ರಜ್ಙಾ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಡಾ| ಪ್ರಜ್ಙಾ ಮಾರ್ಪಳ್ಳಿ ಇವರು ಶ್ರೀ ಕೃಷ್ಣನ, ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಬದುಕನ್ನು ಸಾರ್ಥಕಗೊಳಿಕೊಳ್ಳುವಂತಹ ಸಂದೇಶಗಳನ್ನು ನಾವು ಭಗವದ್ಗೀತೆಯಲ್ಲಿ ಕಾಣಬಹುದಾಗಿದೆ. ಶ್ರೀಕೃಷ್ಣನು ಗುರುವಾಗಿ, ಸ್ನೇಹಿತನಾಗಿ, ಧರ್ಮ ಪ್ರವರ್ತಕನಾಗಿ, ವಾಗ್ಮಿಯಾಗಿ ತಂತ್ರಜ್ಞಾನಿಯಾಗಿ ಇಡೀ ವಿಶ್ವಕ್ಕೆ ಭಗವದ್ಗೀತೆಯ ಸಾರಾಂಶವನ್ನು ತಿಳಿಸಿದವರು ಎಂದರು.
ಶ್ರೀಕೃಷ್ಣನದು ಜಗತ್ತೇ ವಂದಿಸುವಂತಹ ವ್ಯಕ್ತಿತ್ವ. ಯಾವ ಪ್ರತಿಫಲಾಪೇಕ್ಷೆಯನ್ನು ಅಪೇಕ್ಷಿಸದೇ ತನ್ನ ಕಾಯಕವನ್ನು ನಿಷ್ಠೆಯಿಂದ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ಅವರ ಸಂದೇಶದಲ್ಲಿ ಕಾಣಬಹುದಾಗಿದೆ ಎಂದ ಅವರು, ಪ್ರತಿಯೊಬ್ಬರೂ ಧರ್ಮ, ನಿಷ್ಠೆಯ ಹಾದಿಯಲ್ಲಿ ನಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ ಮಾತನಾಡಿ, ಗೀತೆಯ ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ: ದಂತೆ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳು ಶ್ರಧ್ಧೆ ಹಾಗೂ ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ಮಾಡಬೇಕು. ಇದರಿಂದ ಜೀವನದಲ್ಲಿ ಯಶಸ್ಸು ಹಾಗೂ ಗೌರವವನ್ನು ಕಾಣಲು ಸಾಧ್ಯವೆಂದು ಹೇಳಿದರು.
ಉಡುಪಿ ಯಾದವ ಗೊಲ್ಲ ಸಮಾಜ ಸಂಘದ ಅಧ್ಯಕ್ಷ ದಯಾನಂದ ಬಿ.ಆರ್ ರವರು, ಕಾಲೇಜಿನ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸಾಂಸ್ಕೃತಿಕ ಚಿಂತಕ ಮಹೇಶ್ ನಿರೂಪಿಸಿ ವಂದಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now