
ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನ ನೂತನ ಧರ್ಮಗುರುಗಳಾಗಿ ನಿಯೋಜನೆಗೊಂಡಿರುವ ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಜೂನ್ 20 ರಂದು ಹುದ್ದೆಯನ್ನು ವಹಿಸಿಕೊಂಡರು. ಅವರು ಕಳೆದ 17 ವರ್ಷಗಳಿಂದ ಕಂಕನಾಡಿ ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಶುಕ್ರವಾರ ಪಾಲ್ದನೆ ಚರ್ಚ್ ಗೆ ಆಗಮಿಸಿದ ಸಂದರ್ಭ ಧರ್ಮಗುರು ವಂದನೀಯ ಆಲ್ಬನ್ ಡಿ’ಸೋಜಾ, ವಲಯದ ವಿಕಾರ್ ವಾರ್ ವಂದನೀಯ ಫಾ. ಜೇಮ್ಸ್ ಡಿ ಸೋಜಾ, ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಆಧ್ಯಾತ್ಮಿಕ ಸಮಿತಿಯ ಸಂಚಾಲಕಿ ಪ್ರೆಸಿಲ್ಲಾ ಫೆರ್ನಾಂಡಿಸ್ ಮತ್ತು ಪದಾಧಿಕಾರಿಗಳು ಹಾರ್ದಿಕ ಸ್ವಾಗತ ಕೋರಿದರು.

ಪ್ರಾರ್ಥನೆ ಮತ್ತು ಧಾರ್ಮಿಕ ವಿಧಿ ವಿಧಾನಗಳ ಬಳಿಕ ಸಿಟಿ ವಲಯದ ವಿಕಾರ್ ವಾರ್ ವಂದನೀಯ ಫಾ. ಜೇಮ್ಸ್ ಡಿ ಸೋಜಾ ಅವರು ಹುದ್ದೆ ಸ್ವೀಕಾರ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಚರ್ಚಿನ ನಿರ್ಗಮನ ಧರ್ಮಗುರು ವಂದನೀಯ ಫಾ. ಆಲ್ಬನ್ ಡಿ’ಸೋಜಾ ಅವರು ತನಗೆ ಇದುವರೆಗೆ ನೀಡಿದ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು.

ಬಳಿಕ ಮಾತನಾಡಿದ ನೂತನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ತನ್ನ ಮುಂದಿನ ಸೇವೆಗೆ ಚರ್ಚ್ ಆಡಳಿತ ಮಂಡಳಿ ಮತ್ತು ವಿಶ್ವಾಸಿಗಳ ಸಹಕಾರ ಕೋರಿದರು. ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಅವರು ಸ್ವಾಗತಿಸಿ ನೂತನ ಧರ್ಮಗುರುಗಳ ಕಿರು ಪರಿಚಯ ನೀಡಿದರು. ಪಾಲನಾ ಮಂಡಳಿ ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಹಾಗೂ ಆಧ್ಯಾತ್ಮಿಕ ಸಮಿತಿಯ ಸಂಚಾಲಕಿ ಪ್ರೆಸಿಲ್ಲಾ ಫೆರ್ನಾಂಡಿಸ್ ವೇದಿಕೆಯಲ್ಲಿದ್ದ ಧರ್ಮಗುರುಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು

ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾ. ಫಾವುಸ್ತಿನ್ ಲೋಬೊ, ಫಾ. ಅಜಿತ್ ಮಿನೇಜಸ್, ಫಾ. ಜೀವನ್ ಸಿಕ್ವೇರಾ, ಫಾ. ನೆಲ್ಸನ್ ಪಾಯ್ಸ್, ಫಾ. ಸಿಲ್ವೆಸ್ಟರ್ ಲೋಬೊ, ಫಾ. ರುಡಾಲ್ಫ್ ರವಿ ಡೆಸಾ, ಫಾ. ನೀಲೇಶ್ ಕ್ರಾಸ್ತಾ, ಫಾ. ಅಶ್ವಿನ್ ಕ್ರಾಸ್ತಾ, ಫಾ. ಜಾನ್ ವಾಸ್, ಡಾ. ಆಂಟನಿ ಸಿಲ್ವಾನ್, ಡಾ. ಉದಯ್ ಕುಮಾರ್, ಡಾ. ಕಿರಣ್ ಶೆಟ್ಟಿ, ಎಂ.ಪಿ. ನೊರೊನಾ, ನವೀನ್ ಡಿ ಸೋಜಾ, ಡಾ. ಕೆಲ್ವಿನ್ ಪಾಯಸ್ ಮುಂತಾದವರು ಉಪಸ್ಥಿತರಿದ್ದರು. ಕು. ಜೆನಿಟಾ ಕಾರ್ಯಕ್ರಮ ನಿರೂಪಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























