ಕೋಟ :ಪ್ರೊ.ಬಿ.ಎ ವಿವೇಕ ರೈ ಯವರಿಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ

ಕೋಟ :ಪ್ರೊ.ಬಿ.ಎ ವಿವೇಕ ರೈ ಯವರಿಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ

0Shares

ಕುಂದಾಪುರ :ಹಿರಿಯ ಸಾಹಿತಿ ಮತ್ತು ಲೇಖಕರು ವಿಶ್ರಾಂತ ಕುಲಪತಿಗಳಾದ ಪ್ರೊ ಬಿ.ಎ ವಿವೇಕ ರೈ ಯವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟಿನ ಮೊದಲ ಡಾ. ಶಿವರಾಮ ಕಾರಂತ ಪ್ರಶಸ್ತಿಯನ್ನು ನೀಡಲಾಗಿದೆ. ಕನ್ನಡ ಸಾಹಿತ್ಯ ಮತ್ತು ವಿಮರ್ಶೆ ಜಾನಪದ ಸಂಶೋಧನೆ ಡಾ. ಶಿವರಾಮ ಕಾರಂತರ ಬದುಕಿನ ದಾಖಲಾತಿ ಇತ್ಯಾದಿ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಾರಂತ ಪೀಠವನ್ನು ಸ್ಥಾಪಿಸಿ ಅದರ ಮೂಲಕ ಕಾರಂತರ ಬದುಕು-ಬರಹಗಳ ಹಲವು ಆಯಾಮಗಳನ್ನು ದಾಖಲಿಸುವ ಪ್ರೊ.ಬಿ.ಎ ವಿವೇಕ ರೈ ರವರ ಕಾರ್ಯವನ್ನು ಆಯ್ಕೆ ಸಮಿತಿಯು ಪ್ರಶಂಸಿಸಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ನಾಗಪ್ಪ ಗೌಡ, ಹಿರಿಯ ಸಂಶೋಧಕಿ ಡಾ.ರೇಖಾ ಬನ್ನಾಡಿ, ರಂಗ ತಜ್ಞ ವೆಂಕಟರಮಣ ಐತಾಳ, ಟ್ರಸ್ಟಿನ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳನ್ನೊಳಗೊಂಡ ತಜ್ಞರ ಆಯ್ಕೆ ಸಮಿತಿಯು ಪ್ರಶಸ್ತಿಯ ಆಯ್ಕೆ ನಡೆಸಿದೆ. ಅಕ್ಟೋಬರ್ 11 ರಂದು ಸಂಜೆ 4 ಗಂಟೆಗೆ ಎಂ.ಜಿ. ಎಂ ಕಾಲೇಜಿನ ರವೀಂದ್ರ ಕಲಾ ಮಂಟಪದಲ್ಲಿ ನಡೆಯುವ ಕಾರಂತರ ಜನ್ಮದಿನೋತ್ಸವ-ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಶಸ್ತಿಯು ಇಪ್ಪತೈದು ಸಾವಿರ ರೂಪಾಯಿ ಮೊತ್ತ, ಪ್ರಶಸ್ತಿ ಫಲಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now