
ಉಪ್ಪೂರು: ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಸರ್ಕಾರಿ ಪ್ರೌಢಶಾಲೆ ಹಾಗೂ ಜಿಟಿಟಿಸಿ ಕಾಲೇಜಿನ ಆವರಣವು ಕಸದ ರಾಶಿ, ದಟ್ಟ ಪೊದೆಗಳು ಮತ್ತು ಅಪಾಯಕಾರಿ ಮರಗಳಿಂದ ಆವೃತಗೊಂಡಿದ್ದು, ವಿದ್ಯಾರ್ಥಿಗಳ ಸುರಕ್ಷತೆಗೆ ಗಂಭೀರ ಆತಂಕ ಉಂಟುಮಾಡಿದೆ.
ಶಾಲೆಯ ಕಾಂಪೌಂಡ್ಗೆ ಅಂಟಿಕೊಂಡಂತೆ ದಟ್ಟ ಪೊದೆಗಳು ಬೆಳೆದಿದ್ದು, ಕಸದ ರಾಶಿ ತುಂಬಿಕೊಂಡಿದೆ. ಅಲ್ಲದೆ, ಅಪಾಯಕಾರಿ ಮರಗಳು ಕಾಂಪೌಂಡ್ಗೆ ತಾಗಿಕೊಂಡಿರುವುದರಿಂದ ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಂಪೌಂಡ್ ಬದಿಯ ಚರಂಡಿಗಳು ಕಸದಿಂದ ಮುಚ್ಚಿಹೋಗಿರುವ ಪರಿಣಾಮ ಮಳೆನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲೇ ನಿಂತುಕೊಳ್ಳುತ್ತಿದೆ. ಇದರಿಂದ ಈಗಾಗಲೇ ಹಲವು ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.
ದಟ್ಟ ಪೊದೆಗಳ ನಡುವೆ ವಿಷಕಾರಿ ಹಾವು ಸೇರಿದಂತೆ ಇತರೆ ಜಂತುಗಳು ಆಶ್ರಯ ಪಡೆಯುವ ಸಾಧ್ಯತೆ ಇರುವುದರಿಂದ ಶಾಲಾ ಮಕ್ಕಳು ಆಟವಾಡುವ ವೇಳೆ ಅಪಾಯ ಎದುರಾಗುವ ಭೀತಿ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಶಾಲೆ ಹಾಗೂ ಜಿಟಿಟಿಸಿ ಕಾಲೇಜು ಆಡಳಿತ ಮಂಡಳಿ, ಗ್ರಾಮ ಪಂಚಾಯಿತಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಪೊದೆ, ಕಸದ ರಾಶಿ ಹಾಗೂ ಅಪಾಯಕಾರಿ ಮರಗಳನ್ನು ತೆರವುಗೊಳಿಸಿ, ಚರಂಡಿ ಸ್ವಚ್ಛಗೊಳಿಸಿ, ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಆಗ್ರಹಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now